ರಾಜ್ಯ

ನಿಷೇಧಿತ ರೂ.500 ನೋಟುಗಳ ಬದಲಿಸಲು ಯತ್ನ: ಮೂವರು ಆರೋಪಿಗಳ ಬಂಧನ, ರೂ.88 ಲಕ್ಷ ಮೌಲ್ಯದ ನೋಟುಗಳು ವಶಕ್ಕೆ

Manjula VN

ಬೆಂಗಳೂರು: ಕೆಲ ವರ್ಷಗಳ ಹಿಂದೆ ರದ್ದುಗೊಂಡಿರುವ ರೂ.500 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳನ್ನು ಪದ್ಮನಾಭನಗರ ನಿವಾಸಿ ಯೋಗಾನಂದಂ ಅಲಿಯಾಸ್ ಯೋಗೇಶ್ (39), ಆಂಧ್ರಪ್ರದೇಶದ ಪುಟ್ಟಪರ್ತಿ ಮೂಲದ ವೆಂಕಟ್ ನಾರಾಯಣ್ ಅಲಿಯಾಸ್ ರಾಜಣ್ಣ ಎಂ (60) ಮತ್ತು ಹರಿಪ್ರಸಾದ್ (53) ಎಂದು ಗುರುತಿಸಲಾಗಿದೆ.

ಕದಿರೇನಹಳ್ಳಿ ಸೇತುವೆ ಬಳಿ ನಿಷೇಧಿತ ನೋಚು ವಿನಿಮಯ ಮಾಡಿಕೊಳ್ಳಲು ಕಾರಿನಲ್ಲಿ ಕೆಲವರು ಕಾದು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿಗಳು ತಿಳಿದುಬಂದಿತ್ತು. ಇದರಂತೆ ಸ್ಥಳಕ್ಕೆ ಧಾವಿಸಿ ಕಾರನ್ನು ಪರಿಶೀಲಿಸಿದಾಗ ನಿಷೇಧಿತ 40 ಲಕ್ಷ ರೂ ನೋಟುಗಳು ಪತ್ತೆಯಾಗಿತ್ತು. ಇದರಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮನೆಯಲ್ಲಿ ಇನ್ನೂ ರೂ.48 ಲಕ್ಷ ನಿಷೇಧಿತ ನೋಟುಗಳನ್ನು ಇರಿಸಿರುವುದು ತಿಳಿದುಬಂದಿತ್ತು. ಆ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಯಾರೊಂದಿಗೆ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಇದೀಗ  ಆರೋಪಿಗಳ ವಿರುದ್ಧ 2017 ರ ನಿರ್ದಿಷ್ಟ ಬ್ಯಾಂಕ್ ನೋಟುಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT