ರಾಜ್ಯ

ಸೋಮವಾರ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್‌ ಜಾಮ್‌, ವಾಹನ ಸವಾರರ ಪರದಾಟ

Lingaraj Badiger

ಬೆಂಗಳೂರು: ಭಾರೀ ಟ್ರಾಫಿಕ್ ಜಾಮ್‌ಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಪ್ರದೇಶದಲ್ಲಿ ಸಂಚಾರ ದಟ್ಟಣೆಯು ಸೋಮವಾರ ಪೀಕ್ ಅವರ್‌ನಲ್ಲಿ ಮತ್ತಷ್ಟು ತೀವ್ರಗೊಂಡಿದ್ದು, ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು.

ಸಂಚಾರ ಪೊಲೀಸರು ಇಲ್ಲಿನ ಸರ್ವೀಸ್ ರಸ್ತೆಯನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿದ್ದು ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಯಿತು. ಈ ರಸ್ತೆಯು ಬಳ್ಳಾರಿ ಮುಖ್ಯ ರಸ್ತೆಯ ಮೂಲಕ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ಸುತ್ತಮುತ್ತಲಿನ ಹಲವಾರು ಪ್ರದೇಶಗಳ ನಿವಾಸಿಗಳು ಇಲ್ಲಿಂದ ನಗರವನ್ನು ಪ್ರವೇಶಿಸಲು ಅಥವಾ ತಮ್ಮ ತಮ್ಮ ತಮ್ಮ ಪ್ರದೇಶಗಳನ್ನು ತಲುಪಲು ಬಳಸುತ್ತಿದ್ದರು.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಸ್ಟೀಮ್ ಮಾಲ್ ಮತ್ತು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಂಭಾಗದಲ್ಲಿರುವ ಸರ್ವಿಸ್ ರಸ್ತೆಯಲ್ಲಿ 2 ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಸೋಮವಾರದಿಂದ ಪ್ರಾಯೋಗಿಕ ಆಧಾರದ ಮೇಲೆ ಇದನ್ನು ಪ್ರಯತ್ನಿಸುತ್ತಿದ್ದೇವೆ ಎಂದು ಉನ್ನತ ಟ್ರಾಫಿಕ್ ಪೋಲೀಸ್ ಅಧಿಕಾರಿಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ವಾರದ ಹಿಂದೆ ಹೆಬ್ಬಾಳ ಸೇರಿದಂತೆ ಬೆಂಗಳೂರಿನ 10 ಪ್ರಮುಖ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. 

"ನಮ್ಮ ಈ ಕ್ರಮ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಎರಡು ಅಥವಾ ಮೂರು ದಿನಗಳವರೆಗೆ ನೋಡುತ್ತೇವೆ" ಎಂದು ಅವರು ಹೇಳಿದ್ದಾರೆ. ಆದರೆ ಸಂಚಾರಿ ಪೊಲೀಸರ ಹಠಾತ್ ಕ್ರಮದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. 

ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಸಂಚಾರ ಪೊಲೀಸರು ಸ್ಥಳದಲ್ಲಿಯೇ ಇದ್ದು, ನಾಳೆಯಿಂದ ಫ್ಲೈಓವರ್ ಅನ್ನು ಬಳಸಬೇಕೆಂದು ಸಾರ್ವಜನಿಕರಿಗೆ ತಿಳಿಸಲು ನಾವು ತಕ್ಷಣವೇ ಸೈನ್‌ಬೋರ್ಡ್‌ಗಳನ್ನು ಹಾಕಲು ಬಿಬಿಎಂಪಿಗೆ ಹೇಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT