ಬೆಂಗಳೂರು: ನಮಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ನೂರಕ್ಕೂ ಹೆಚ್ಚು ಮಂದಿ ಕನ್ನಡಿಗರು ಅಮರನಾಥ ಯಾತ್ರೆಯಲ್ಲಿದ್ದಾರೆ. ಬಹುತೇಕರು ಸುರಕ್ಷಿತವಾಗಿದ್ದಾರೆ. ಅಹಿತಕರ ಸುದ್ದಿ ಯಾವುದೂ ಬಂದಿಲ್ಲ, ಅಲ್ಲಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜೊತೆಗೆ ಸಂಪರ್ಕದಲ್ಲಿದ್ದೇವೆ, ಸಹಾಯವಾಣಿಯನ್ನೂ ತೆರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಹಾಯವಾಣಿಯಲ್ಲಿ ಈಗಾಗಲೇ 15ರಿಂದ 20 ಮಂದಿ ಕರೆ ಮಾಡಿದ್ದಾರೆ. ಅವರು ಇರುವ ಸ್ಥಳದ ಮಾಹಿತಿ ನೀಡಿದ್ದಾರೆ. ಸುರಕ್ಷಿತ ಸ್ಥಳಾಂತರಕ್ಕೆ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ, ಗಡಿ ಭದ್ರತಾ ಪಡೆ, ಐಟಿಬಿಎಫ್, ಐಎಎಫ್ ರಕ್ಷಣಾ ತಂಡ ರಕ್ಷಣಾ ಕಾರ್ಯಗಳನ್ನು ಮಾಡುತ್ತಿವೆ. ನಮ್ಮ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರ ಜೊತೆಗೆ ನೇರ ಸಂಪರ್ಕದಲ್ಲಿದ್ದಾರೆ. ಅಗತ್ಯವಿರುವವರು ಸಹಾಯವಾಣಿಗೆ ಕರೆ ಮಾಡಿದರೆ ರಕ್ಷಿಸುವ ಕಾರ್ಯ ಮಾಡುತ್ತೇವೆ ಎಂದರು.
ಅಮರನಾಥ ಯಾತ್ರಿಕರಿಗೆ ಸರ್ಕಾರದ ಸಹಾಯವಾಣಿ: ಕರ್ನಾಟಕದಿಂದ ಸುಮಾರು 250 ಯಾತ್ರಿಕರ ತಂಡ ಈ ಬಾರಿ ಅಮರನಾಥ ಯಾತ್ರೆಗೆ ತೆರಳಿದ್ದು, ಅಲ್ಲಿ ಸಂಕಷ್ಟದಲ್ಲಿ, ಪ್ರವಾಹದಲ್ಲಿ, ಮಳೆ ಸಂಬಂಧಿತ ತೊಂದರೆಗಳಿಗೆ ಸಿಕ್ಕಿಬಿದ್ದಲ್ಲಿ ಈ ಕೆಳಗಿನ ಸಹಾಯವಾಣಿಗೆ ಕರೆಮಾಡಬಹುದು ಅಥವಾ ಸಂಪರ್ಕಿಸಬಹುದೆಂದು ಕೋರಲಾಗಿದೆ.
NDRF - 011-23438252, 011-23438253
ಕಾಶ್ಮೀರ ವಿಭಾಗೀಯ ಸಹಾಯವಾಣಿ- 0194-2496240
ಶ್ರೈನ್ ಬೋರ್ಡ್ ಸಹಾಯವಾಣಿ- 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ - 080-1070, 22340676,
ಇಮೇಲ್:- incomedmkar@gmail.com,
seockarnataka@gmail.com
ಮಳೆ ಸಂಬಂಧಿಸಿ ಚರ್ಚೆ: ಕರಾವಳಿ, ಮಲೆನಾಡು, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮತ್ತು ಮಳೆ ಸಂಬಂಧಿತ ಅವಘಡಗಳು ಸಂಭವಿಸಿರುವುದರಿಂದ ನಿನ್ನೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದೇನೆ.
ಇದನ್ನೂ ಓದಿ: ಮಳೆ ಪೀಡಿತ 13 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್: ಹಾನಿ, ಪರಿಹಾರ ಕುರಿತು ಚರ್ಚೆ
ಇನ್ನು ಕೆಲವು ಭಾಗಗಳಲ್ಲಿ ಇನ್ನೆರಡು ಮೂರು ದಿನಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಅದಕ್ಕೆ ಅನುಗುಣವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.