ರಾಜ್ಯ

ಮಡಿಕೇರಿಯ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಮತ್ತೆ ಭೂಕುಸಿತ: ಭಾರೀ ಶಬ್ದಕ್ಕೆ ಬೆಚ್ಚಿದ ಗ್ರಾಮಸ್ಥರು

Sumana Upadhyaya

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಮೊನ್ನೆ ಸೋಮವಾರ ರಾತ್ರಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತಕ್ಕೆ ಕೆಲವು ನಿಮಿಷಗಳ ಮೊದಲು, ಇಲ್ಲಿನ ನಿವಾಸಿಗಳಿಗೆ ದೊಡ್ಡ ಶಬ್ದ ಕೇಳಿಸಿತು. ಭೂಕುಸಿತದಿಂದಾಗಿ ಗ್ರಾಮಸ್ಥರು ಅಳವಡಿಸಿದ್ದ ತಾತ್ಕಾಲಿಕ ಸೇತುವೆಯೂ ಕೊಚ್ಚಿ ಹೋಗಿದೆ.

ಜಿಲ್ಲೆಯ ಮಡಿಕೇರಿ ತಾಲ್ಲೂಕಿನ 2ನೇ ಮೊಣ್ಣಂಗೇರಿ ಗ್ರಾಮವು 2018 ರ ಭೂಕುಸಿತದಲ್ಲಿ ಹೆಚ್ಚು ಹಾನಿಗೊಳಗಾದ ಗ್ರಾಮಗಳಲ್ಲಿ ಒಂದಾಗಿದೆ. ರಾಮಕೊಲ್ಲಿ ಸೇತುವೆಯು ಅವೈಜ್ಞಾನಿಕ ಮತ್ತು ವಿಳಂಬ ಪರಿಹಾರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ರಾಮಕೊಲ್ಲಿ ಸೇತುವೆಯ ಬಳಿ ಹೊಸದಾಗಿ ಭೂಕುಸಿತ ಸಂಭವಿಸಿದ ನಂತರ ದೊಡ್ಡ ಶಬ್ದ ಕೇಳಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಡಿಸಿ ಬಿ.ಸಿ.ಸತೀಶ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಅಧಿಕಾರಿಗಳು ಮನಗಂಡಿದ್ದಾರೆ. 

ಮೊನ್ನೆ ಸೋಮವಾರ ರಾತ್ರಿ 7.30ರ ಸುಮಾರಿಗೆ ಭಾರೀ ಸದ್ದು ಕೇಳಿಸಿದ್ದು, ಹೊಸ ಭೂಕುಸಿತ ಸಂಭವಿಸಿದೆ ಎಂದು ನಿವಾಸಿಗಳು ಹೇಳಿದರು. ಭೂಕುಸಿತದಿಂದ ಸೇತುವೆಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿಲ್ಲದಿದ್ದರೂ ಈ ರೀತಿ ಭೂಕುಸಿತವಾಗುವುದರ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಕೆ ಜಿ ಬೋಪಯ್ಯ ಹೇಳುತ್ತಾರೆ. 

SCROLL FOR NEXT