ರಾಜ್ಯ

ನೀರಾವರಿ ಯೋಜನೆ ಅನುಷ್ಠಾನದಲ್ಲಿ ವಿಳಂಬ, ಗುತ್ತಿಗೆದಾರರಿಗೆ ಶೇ.1 ರಿಂದ 7 ರಷ್ಟು ದಂಡ: ಗೋವಿಂದ ಕಾರಜೋಳ

Nagaraja AB

ಕಲಬುರಗಿ: ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸಲು, ವೆಚ್ಚದ ಹೆಚ್ಚಳ ತಪ್ಪಿಸಲು ಮತ್ತು ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಲ್ಲಿ ಶಿಸ್ತು ತರಲು ಯೋಜನೆಗಳನ್ನು ವಿಳಂಬಗೊಳಿಸುವ ಗುತ್ತಿಗೆದಾರರಿಗೆ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭಾನುವಾರ ಹೇಳಿದರು. 

ಅಂತಹ ಗುತ್ತಿಗೆದಾರರಿಂದ ಯೋಜನೆಯ ಉಳಿದ ವೆಚ್ಚದ ಶೇ. 1-7ರಷ್ಟು ದಂಡ ವಿಧಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳಿಗೆ ದಂಡದ ಷರತ್ತು ಅನ್ವಯಿಸುತ್ತದೆ ಎಂದು ಅವರು ಹೇಳಿದರು.

ಗುತ್ತಿಗೆದಾರರು ವಿಳಂಬಕ್ಕೆ ನಿಜವಾದ ಕಾರಣ ನೀಡಿದರೆ ದಂಡದಿಂದ ವಿನಾಯಿತಿ ನೀಡಲಾಗುವುದು ವಿಳಂಬವು ಯೋಜನೆಗಳ ವೆಚ್ಚವನ್ನು ಹೆಚ್ಚಿಸುತ್ತಿದೆ, ಇದು ಬೊಕ್ಕಸದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ನೀರಾವರಿ ಇಲಾಖೆಯು ಈಗಾಗಲೇ ಅಂತಹ ಗುತ್ತಿಗೆದಾರರಿಗೆ ದಂಡ ವಿಧಿಸಲು ಪ್ರಾರಂಭಿಸಿದ್ದು, ಕಲಬುರಗಿ ವ್ಯಾಪ್ತಿಯ ಐದು ಗುತ್ತಿಗೆದಾರರನ್ನು ದಂಡ ವಿಧಿಸಿ ಕಪ್ಪು ಪಟ್ಟಿಗೆ ಸೇರಿಸಲು ಕೃಷ್ಣಾ ನೀರಾವರಿ ನಿಗಮ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಕೃಷ್ಣಾ ನದಿ ನ್ಯಾಯಾಧಿಕರಣದ ಆದೇಶದಂತೆ ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 534.468 ಮೀಟರ್‌ಗೆ ಹೆಚ್ಚಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. 20 ಗ್ರಾಮಗಳು ಮುಳುಗಡೆಯಾಗಲಿದ್ದು, ಈ ಪ್ರದೇಶಗಳನ್ನು ಇಲಾಖೆ ಗುರುತಿಸುತ್ತಿದ್ದು, ಶೀಘ್ರದಲ್ಲಿಯೇ ಭೂಮಿ ಖರೀದಿಸಲಾಗುವುದು ಎಂದರು.

ಎರಡು ತಿಂಗಳಲ್ಲಿ ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆ ಟ್ಯಾಗ್: ಇನ್ನು ಎರಡು ತಿಂಗಳಲ್ಲಿ ಕೇಂದ್ರವು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿದೆ. ಈಗಾಗಲೇ ನಾಲ್ಕು ಇಲಾಖೆಗಳು ಅನುಮೋದನೆ ನೀಡಿವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

SCROLL FOR NEXT