ನೆಲಮಂಗಲ: ನಗರದ ಹೊರ ವಲಯದ ದಾಬಸ್ ಪೇಟೆಯ ಕೆರೆಯಲ್ಲಿ ಸೂಟ್ ಕೇಸ್ ನಲ್ಲಿ ಮಹಿಳೆ ಶವ ತೇಲಿ ಬಂದಿದ್ದು, ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಹೊನ್ನೇನಹಳ್ಳಿ ಗ್ರಾಮದ ಗ್ರಾಮ ಪಂಚಯತಿಯ ಕೆಂಗಲ್ ಗ್ರಾಮದ ಅಗಳಿ ಕಟ್ಟೆಯ ಸಣ್ಣಕೆರೆಯಲ್ಲಿ ತೇಲಿಬಂದ ಸೂಟ್ಕೇಸ್ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳೀಯರು ಕೊಳೆತ ವಾಸನೆ ಹಾಗೂ ಅನುಮಾನಾಸ್ಪದ ಸೂಟ್ಕೇಸ್ ತೇಲುತ್ತಿರುವುನ್ನು ಗಮನಿಸಿ ದಾಬಸ್ ಪೇಟೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ದಾಬಸ್ ಪೇಟೆ ಪೋಲೀಸರು ಸೂಟ್ಕೇಸ್ ವಶಕ್ಕೆ ಪಡೆದು ತೆರೆದು ನೋಡಿದಾಗ ಅಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಮಹಿಳೆಯನ್ನು ಬೇರೆಡೆ ಕೊಲೆಗೈದು ತಂದು ಎಸೆದಿರುವ ಶಂಕೆಯಿದೆ.
ಇದನ್ನೂ ಓದಿ: ತುಮಕೂರು: ದಲಿತ ಸಂಘರ್ಷ ಸಮಿತಿ ಮುಖಂಡನ ಬರ್ಬರ ಹತ್ಯೆ
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿ ಕೃಷ್ಣ, ನೆಲಮಂಗಲ ವೃತ್ತ ನಿರೀಕ್ಷಕ ರಾಜೀವ್, ದಾಬಸ್ ಪೇಟೆ ಠಾಣೆ ಆರಕ್ಷಕ ಉಪನಿರೀಕ್ಷಕ ಎಂ.ಎನ್.ಮುರಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.