ರಾಜ್ಯ

ಹಾಸನ: ಪ್ರಸಿದ್ಧ ಹೊಯ್ಸಳ ದೇವಾಲಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

Lingaraj Badiger

ಹಾಸನ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಬೇಲೂರು ಮತ್ತು ಹಳೇಬೀಡಿನಲ್ಲಿರುವ ಪ್ರಸಿದ್ಧ ಹೊಯ್ಸಳ ದೇವಾಲಯಗಳಿಗೆ ಭೇಟಿ ನೀಡಿದರು.

ಹಾಸನ ಜಿಲ್ಲೆಗೆ ತಮ್ಮ ಚೊಚ್ಚಲ ಭೇಟಿಯಲ್ಲಿ ರಾಜ್ಯಪಾಲರು ಕ್ರಮವಾಗಿ ಬೇಲೂರು ಮತ್ತು ಹಳೇಬೀಡಿನ ಚನ್ನಕೇಶವ ದೇವಸ್ಥಾನ ಮತ್ತು ಹೊಯ್ಸಳೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವಾಲಯದ ಸುತ್ತಮುತ್ತ ಕೆತ್ತಲಾದ ಅದ್ಭುತ ವಾಸ್ತು ಶಿಲ್ಪಗಳನ್ನು ವೀಕ್ಷಿಸಿದರು.

ಐತಿಹಾಸಿಕ ಬೇಲೂರು ಮತ್ತು ಹಳೇಬೀಡು ವಾಸ್ತು ಶಿಲ್ಪ ಶೈಲಿ ಕುರಿತು ಹಿರಿಯ ಮಾರ್ಗದರ್ಶಕ ಅಸ್ಲಂ ಶರೀಫ್ ಅವರು ರಾಜ್ಯಪಾಲರಿಗೆ ತಿಳಿಸಿದರು. ದೇವಾಲಯದ ಇತಿಹಾಸ, ಆಡಳಿತಗಾರರು ಮತ್ತು ನಿರ್ಮಾಣದ ಉದ್ದೇಶವನ್ನು ವಿವರಿಸಿದ್ದಾರೆ.

ದೇವಾಲಯದ ಸುತ್ತಲೂ ಸ್ಥಾಪಿಸಲಾದ ಕೆತ್ತನೆಗಳು ಮತ್ತು ಶಿಲಾಬಾಲಿಕೆಯರ ವಾಸ್ತು ಶಿಲ್ಪ ಕಂಡು ರಾಜ್ಯಪಾಲರು ವಿಸ್ಮಿತರಾದರು. ಬಳಿಕ ಚನ್ನಕೇಶವ ದೇವರಿಗೆ ಪೂಜೆ ಸಲ್ಲಿಸಿದರು. ರಾಜ್ಯಪಾಲರು ಹಾಗೂ ಕುಟುಂಬದವರ ಹೆಸರಿನಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಅರ್ಚನೆ ಮಾಡಿದರು.

ಇದಕ್ಕೂ ಮುನ್ನ ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿದುಲ್ಲತಾ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು.

SCROLL FOR NEXT