ರಾಜ್ಯ

ಅಗ್ನಿಪಥ ಬಹಳ ಉತ್ತಮ ಯೋಜನೆ, ಇದರಡಿ ತರಬೇತಿ ಪಡೆದವರನ್ನು ಪೊಲೀಸ್ ಇಲಾಖೆಗೂ ನೇಮಿಸಿಕೊಳ್ಳಬಹುದು: ಆರಗ ಜ್ಞಾನೇಂದ್ರ

Sumana Upadhyaya

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಎಸಿಬಿ ಕಡೆಯಿಂದ ಆಗಾಗ ಆಗುತ್ತಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.

ಭವಿಷ್ಯದಲ್ಲಿ ಏನೋ ಆಗುತ್ತದೆ ಎಂದು ಈಗ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು. ಅಗ್ನಿಪಥ ಕೇಂದ್ರ ಸರ್ಕಾರದ ಉತ್ತಮವಾದ ಯೋಜನೆ. ಸಮಾಜದಲ್ಲಿ ಪರಿವರ್ತನೆಯಾಗಲು ಬಿಡುವುದಿಲ್ಲ ಎಂದು ಹೇಳುವ ಕೆಲವು ವರ್ಗಗಳಿವೆ. ಅಂತವರು ಇದರ ಬಗ್ಗೆ ಪ್ರತಿಭಟನೆ, ಅಪಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆ ಇನ್ನೂ ಜಾರಿಯಾಗಿಲ್ಲ, ಜಾರಿ ಮಾಡುತ್ತೇವೆ ಎಂದು ಹೇಳಿದಾಗಲೇ ಇಷ್ಟೆಲ್ಲಾ ಪ್ರತಿಭಟನೆ, ವಿರೋಧ ಏಕೆ ಎಂದು ಪ್ರಶ್ನಿಸಿದರು.

ಅಗ್ನಿಪಥ ತುಂಬಾ ಉತ್ತಮ ಯೋಜನೆ, ಇಸ್ರೇಲ್ ನಂತಹ ದೇಶಗಳಲ್ಲಿ ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕೆಂಬ ನಿಯಮವಿದೆ. ನಮ್ಮ ದೇಶದಲ್ಲಿ ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷ ತರಬೇತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ವೇತನ, ನಾಲ್ಕನೇ ವರ್ಷದಲ್ಲಿ ನಿವೃತ್ತಿಯಾದ ನಂತರ ಪ್ರೋತ್ಸಾಹಕ ಧನ, ಶೇಕಡಾ 25ರಷ್ಟನ್ನು ಮಿಲಿಟರಿಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ನಾಲ್ಕು ವರ್ಷ ತರಬೇತಿ ಪಡೆದವರನ್ನು ಪೊಲೀಸ್ ಇಲಾಖೆಗೂ ಸೇರಿಸಲು ಅನುಕೂಲವಾಗುತ್ತದೆ, ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕುತ್ತದೆ ಎಂದರು.

SCROLL FOR NEXT