ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಪ್ರಧಾನಿಯ ಈ ಭೇಟಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬರೊಬ್ಬರಿ 24 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
ಈ ವೆಚ್ಚದಲ್ಲಿ ರಸ್ತೆಗಳಿಗೆ ಟಾರ್ ಹಾಕುವುದು, ಗುಂಡಿ ಸರಿಪಡಿಸುವುದು, ಹೊಸದಾಗಿ ಟಾರ್ ಮಾಡಿದ ರಸ್ತೆಗಳಲ್ಲಿ ಬಿಳಿ ಬಣ್ಣದ ಗೆರೆ ಹಾಕುವುದು ಹಾಗೂ ಚರಂಡಿಗಳನ್ನು ಮುಚ್ಚುವುದು ಸೇರಿದೆ.
ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಮಾತನಾಡಿ, ಕೋಮಘಟ್ಟ ಮತ್ತು ಹೆಬ್ಬಾಳ ಸುತ್ತಮುತ್ತಲಿನ ರಸ್ತೆಗಳನ್ನು ಸರಿಪಡಿಸಲು 14 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಆಯುಕ್ತರು, ಆಡಳಿತಾಧಿಕಾರಿಗಳ ಖಾತೆಯಿಂದ ಈ ವೆಚ್ಚ ಮಾಡಲಾಗಿದ್ದು, ಈ ಪ್ರದೇಶಗಳ ರಸ್ತೆಗಳು ಹಾಳಾಗಿದ್ದರೂ ಕಳೆದ ಒಂದೂವರೆ ವರ್ಷಗಳಿಂದ ಸರಿಪಡಿಸಿರಲಿಲ್ಲ. ಆದರೆ ಈಗ ಕೇವಲ 4 ದಿನಗಳಲ್ಲಿ ಅವುಗಳನ್ನು ಸರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಅವರು ನಿನ್ನೆ ಬೆಗಳೂರಿನಲ್ಲಿ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳ ನಂತರ ಕೊಮ್ಮಘಟ್ಟದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಮೈಸೂರಿಗೆ ತೆರಳಿದರು.