ರಾಜ್ಯ

ಸಂವಿಧಾನ ವಿರೋಧಿ, ಸಮುದಾಯದ ವಿರುದ್ಧ ದ್ವೇಷ ತುಂಬಿದ ಕೃತ್ಯಗಳಿಂದ ಬೇಸರ: ಬಿಜೆಪಿ ನಾಯಕ ಅನ್ವರ್ ಮಾಣಿಪ್ಪಾಡಿ

Shilpa D

ಮಂಗಳೂರು: ಸಂವಿಧಾನದ ಈ ದೇಶದ ಪವಿತ್ರ ಗ್ರಂಥವಾಗಿದ್ದು, ರಾಜ್ಯದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಸಂವಿಧಾನ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದರಿಂದ ಬೇಸರವಾಗಿದೆ ಎಂದು ಬಿಜೆಪಿ ನಾಯಕ ಹಾಗು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದದಿಂದ ಒಗ್ಗಟ್ಟಿನಿಂದ ಇದ್ದ ನಾಡಿನಲ್ಲಿ ಕೆಲ ಸಮಯದಿಂದ ಸಂವಿಧಾನ ವಿರೋಧಿ, ಸಮುದಾಯದ ವಿರುದ್ಧ ದ್ವೇಷ ತುಂಬಿದ ಕೃತ್ಯಗಳು ನಡೆಯುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ವಕ್ಫ್ ಹಗರಣಗಳ ಕುರಿತಂತೆ 10 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಕೂಡಾ ವರದಿಗೆ ಜಯ ದೊರಕಿದೆ. ಇದನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಈ ಬಗ್ಗೆ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೂ ಮನವಿ ಮಾಡಿದ್ದೇ. ಈ ಸಂದರ್ಭದಲ್ಲಿ ಆಮಿಷವೊಡ್ಡಿ ಪ್ರಕರಣದಿಂದ ಹಿಂದಕ್ಕೆ ಸರಿಯಲು ಒತ್ತಾಯಿಸಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಸರಕಾರಕ್ಕೂ ಪತ್ರ ಬರೆದು ದಾಖಲೆಗಳ ಸಹಿತ ವಿವರ ನೀಡಿದ್ದೇನೆ. ಆದರೆ ಸರಕಾರವೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಬ್‍ಕಾ ಸಾತ್ ಸಬ್‍ಕಾ ವಿಕಾಸ್ ಧ್ಯೇಯದ ಆಡಳಿತವನ್ನು ಜಾರಿಗೊಳಿಸಲು ರಾಜ್ಯದಲ್ಲಿ ಸಾಧ್ಯವಾಗುತ್ತಿಲ್ಲ. ಮೋದಿ ಅವರ ಮೇಲೆ ವಿಶ್ವಾಸವಿದೆ. ಈ ವಿಷಯದ ಬಗ್ಗೆ ಅವರ ಗಮನಕ್ಕೂ ತರುವ ಪ್ರಯತ್ನ ಮಾಡಿದ್ದೇನೆ. ಆದರೆ ಸ್ಪಂದನೆ ದೊರಕಿಲ್ಲ ಎಂದು ಹೇಳಿದರು.

ಈ ನಡುವೆ ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಯಲಹಂಕದ ಮಸೀದಿ ತೆರೆಯಲು ಬಿಡದೆ ಅಲ್ಲಿನ ಪೊಲೀಸರು ಉದ್ಧಟತನ ತೋರಿಸಿದ್ದಾರೆ. ರಾಜ್ಯದ ಹಲವೆಡೆ ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ, ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವಾಗ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

SCROLL FOR NEXT