ರಾಜ್ಯ

ಠಾಣೆಗಳಲ್ಲಿ ಸಿಬ್ಬಂದಿ ಕೊರತೆ: ರಜೆ ಕಾರಣ ಪಟ್ಟಿ ಮಾಡಿ, ಸಕಾರಣವಿಲ್ಲದೆ ರಜೆ ಕೇಳಿದರೆ ಶಿಸ್ತುಕ್ರಮ; ಡಿಸಿಪಿ ಎಚ್ಚರಿಕೆ

Manjula VN

ಬೆಂಗಳೂರು: ನಗರದಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಎಂದುರಾಗಿದೆ ಎಂದು ಹೇಳಲಾಗುತ್ತಿದ್ದು, ಸಮಸ್ಯೆ ಸರಿದೂಗಿಸಲು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬು ಅವರು ಸಿಬ್ಬಂದಿಗಳ ರಜೆಗೆ ಕತ್ತರಿ ಪ್ರಯೋಗ ಮಾಡಲು ಮುಂದಾಗಿದ್ದಾರೆ.

ಇದಕ್ಕಾಗಿ ರಜೆ ಕಾರಣಗಳನ್ನು ಪಟ್ಟಿ ಮಾಡಿರುವ ಡಿಸಿಪಿ, ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ಮೃತಪಟ್ಟಿದ್ದರೆ ಮಾತ್ರ ರಜೆ ಪಡೆದುಕೊಳ್ಳಬಹುದು, ಸಕಾರಣವಿಲ್ಲದೆ ರಜೆ ಕೇಳಿದರೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸಿಬ್ಬಂದಿಗಳು ಅನಗತ್ಯ ರಜೆ ತೆಗೆದುಕೊಳ್ಳುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಷ್ಟವಾಗುತ್ತದೆ. ಪೊಲೀಸ್ ಠಾಣೆಗಳು, ಕಚೇರಿ ಕೆಲಸದಲ್ಲಿ ತೊಂದರೆಯಾಗುತ್ತಿದೆ. ಆಗ್ನೇಯ ವಿಭಾಗದಲ್ಲಿ ಪಿಸಿಗಳಿಂದ ಹಿಡಿದು ಇನ್​ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳಿಂದಲೂ ರಜೆಗೆ ನಿರಂತರ ಬೇಡಿಕೆ ಬರುತ್ತಿದೆ. ಕೆಲವರಂತೂ ಸಮರ್ಪಕ ಕಾರಣ ನೀಡದೆ ರಜೆ ಕೇಳುತ್ತಿದ್ದಾರೆ. ನಿತ್ಯದ ಕಾರ್ಯನಿರ್ವಹಣೆಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ರಜೆ ಕುರಿತು ಡಿಸಿಪಿ ಸಿ.ಕೆ.ಬಾಬು ಆದೇಶ ಹೊರಡಿಸಿದ್ದಾರೆಂದು ತಿಳಿದುಬಂದಿದೆ.

ಡಿಸಿಪಿ ಆದೇಶ ಹೊರಡಿಸುತ್ತಿದ್ದಂತೆ ಕೆಳ ಹಂತದ‌‌ ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸ್ಪಷ್ಟನೆ ನೀಡಿರುವ ಡಿಸಿಪಿ‌ ಸಿ.ಕೆ. ಬಾಬು, ಕಳೆದ ತಿಂಗಳು 28ರಂದೇ ಆದೇಶ ಹೊರಡಿಸಲಾಗಿತ್ತು. ಈ‌ ಆದೇಶವು ಕೆಳಹಂತದ ಸಿಬ್ಬಂದಿಗೆ‌ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT