ರಾಜ್ಯ

ನಾಟಕ, ಸಾಹಿತ್ಯದ ಮೂಲಕ ಬಸವಣ್ಣ ಜೀವಂತವಾಗಿದ್ದಾರೆ: ಶೋಭಾ ಕರಂದ್ಲಾಜೆ

Manjula VN

ಬೆಂಗಳೂರು: ಸಮಾಜ ಸುಧಾರಕ ಬಸವಣ್ಣನವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಎಲ್ಲ ವರ್ಗದವರಿಗೂ ಸಮಾನ ಗೌರವ ನೀಡಿದ್ದಾರೆ. ಅವರು ಕೇವಲ ವಿವಿಧ ಜಾತಿಗಳನ್ನು ಒಗ್ಗೂಡಿಸದೆ, ಪ್ರತ್ಯೇಕ ವೈದಿಕ ಪದ್ಧತಿಗಳನ್ನು ತಿರಸ್ಕರಿಸುವ ಮೂಲಕ ಮಹಿಳೆಯರನ್ನು ಸಮಾನವಾಗಿ ಪರಿಗಣಿಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭಾನುವಾರ ಹೇಳಿದರು.

ಚಿತ್ರದುರ್ಗದ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಸವಣ್ಣ ಮತ್ತು ನಾರಾಯಣ ಗುರುಗಳ ಕುರಿತು ಮಾತನಾಡಿದರು.

ಕರ್ನಾಟಕ ಇಡೀ ಜಗತ್ತಿಗೆ ಸಮಾನತೆಯ ಪರಿಕಲ್ಪನೆಯನ್ನು ನೀಡಿದೆ. ಸಾಣೇಹಳ್ಳಿ ಮಠವು ನಾಟಕ, ಕಲೆ, ಸಾಹಿತ್ಯದ ಮೂಲಕ ಸಮಾಜಕ್ಕೆ ಬಸವಣ್ಣನವರ ತತ್ವಾದರ್ಶಗಳನ್ನು ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ರಾಜಕಾರಣ ನಿಂತ ನೀರಲ್ಲ, ಸದಾ ಕ್ರಿಯಾಶೀಲವಾಗಿರುತ್ತದೆ, ಸಂಸ್ಕಾರ, ಶುದ್ಧತೆ ಇದ್ದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಮಹಿಳೆ ಮತ್ತು ಮಹಿಳಾ ಸಮಾನತೆಗಾಗಿ ಸಮಾಜ ಸುಧಾರಕ ಬಸವಣ್ಣ ಮನೆ ತೊರೆಯಬೇಕಾಯಿತು. ವರ್ಗರಹಿತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಿ ಶೋಷಣೆ ತೊಲಗಿಸಲು ‘ಲಿಂಗಾಯತ ಧರ್ಮ’ ಕಟ್ಟಿದರು. 900 ವರ್ಷಗಳ ನಂತರವೂ ಆದರ್ಶ ವರ್ಗ-ಜಾತಿರಹಿತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನ್ಯಾ.ಗೋಪಾಲಗೌಡ ಅವರು ಮಾತನಾಡಿ, ಸಂವಿಧಾನದಲ್ಲಿ ಹೆಣ್ಣುಮಕ್ಕಳಿಗೆ ಸಮಾನತೆ ಕಲ್ಪಿಸಿದ್ದರೂ ಸರಕಾರಗಳಾಗಲಿ, ನ್ಯಾಯಾಂಗ ವ್ಯವಸ್ಥೆಯಾಗಲಿ ಸಮಾನತೆ ತರುವಲ್ಲಿ ವಿಫಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

SCROLL FOR NEXT