ರಾಜ್ಯ

ಪ್ರತಿ ಜಿಲ್ಲೆಗೆ ಎಸ್‌ಡಿಆರ್‌ಎಫ್ ಪಡೆ ನಿಯೋಜನೆ: ಗೃಹ ಸಚಿವ ಆರಗ ಜ್ಞಾನೇಂದ್ರ

Srinivasamurthy VN

ಬೆಂಗಳೂರು: ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ರಾಜ್ಯದ ಪ್ರತಿ 3 ಜಿಲ್ಲೆಗೆ ಒಂದು ಎಸ್‌ಡಿಆರ್‌ಎಫ್ ಪಡೆಯನ್ನು ನಿಯೋಜನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯಭವನದಲ್ಲಿಂದು ರಾಜ್ಯ ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಾಗೂ ಎಸ್‌ಡಿಆರ್‌ಎಫ್ ನಿರ್ದೇಶನಾಲಯ ಆಯೋಜಿಸಿದ್ದ ಜೀವದ ಹಂಗನ್ನು ತೊರೆದು ಸಂಕಷ್ಟಕ್ಕೆ ಒಳಗಾದ ಜನತೆಯನ್ನು ರಕ್ಷಿಸಿದ ಸಿಬ್ಬಂದಿಗಳಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ಸಂಕಷ್ಟದ ಸಮಯದಲ್ಲಿ ಕ್ಷಿಪ್ರವಾಗಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.ರಾಜ್ಯ ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಅದರಂತೆ ಪ್ರತಿ ಮೂರು ಜಿಲ್ಲೆಗೆ ಒಂದರಂತೆ ಎಸ್‌ಡಿಆರ್‌ಎಫ್ ಪಡೆಯನ್ನು ನಿಯೋಜಿಸಲಾಗುವುದು ಎಂದರು.

ನಾಗರಿಕರ ಸುರಕ್ಷತೆ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ತುರ್ತು ಹಾಗೂ ಅಗ್ನಿ ಶಾಮಕ ಪಡೆಯನ್ನು ಬಲಪಡಿಸಲಾಗುತ್ತಿದ್ದು, ಅಗ್ನಿಶಾಮಕ ದಳದಲ್ಲಿ ಖಾಲಿ ಇರುವ 1547 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಅವಘಡಗಳ ಸಂದರ್ಭದಲ್ಲಿ ಅತ್ಯಂತ ಎತ್ತರದ ಕಟ್ಟಡ ತಲುಪಲು ಅನುಕೂಲವಾಗುವಂತೆ ಇತ್ತೀಚೆಗೆ 30 ಕೋಟಿ ರೂ. ವೆಚ್ಚದಲ್ಲಿ ಏರಿಯಾ ಲ್ಯಾಡರ್‌ನ್ನು ಅಗ್ನಿಶಾಮಕ ಸೇವೆಗೆ ಸಮರ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಗರಿಕರನ್ನು ರಕ್ಷಣೆ ಮಾಡಿದ ೬೧ ಸಿಬ್ಬಂದಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಮರ್ ಪಾಂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SCROLL FOR NEXT