ರಾಜ್ಯ

ಬೆಂಗಳೂರು: ವ್ಯಕ್ತಿಯ ಮೇಲೆ ಹಲ್ಲೆ ಮಾಡಿ. ಚಿನ್ನಾಭರಣ, ನಗದು ದೋಚಿದ್ದ ಮಹಿಳೆ ಬಂಧನ

Nagaraja AB

ಬೆಂಗಳೂರು: ವ್ಯಕ್ತಿಯೊಬ್ಬನನ್ನು ಬಲೆಗೆ ಬೀಳಿಸಿ ಹಣ, ಕಾರು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದ 23 ವರ್ಷದ ಯುವತಿಯನ್ನು ಸುದ್ದಗುಂಟೆ ಪಾಳ್ಯ ಪೊಲೀಸರು  ಬಂಧಿಸಿದ್ದಾರೆ. ತಾವರೆಕೆರೆ ನಿವಾಸಿ ಪ್ರಿಯಾ ಅಲಿಯಾಸ್ ಅಲಿಯಾ ಬಂಧಿತ ಮಹಿಳೆ. ಈಕೆ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆ ಮತ್ತಿತರ ನಾಲ್ವರು ಹಾಲಿನ ಬೂತ್ ಮಾಲೀಕ ಪ್ರದೀಪ್ (ಹೆಸರು ಬದಲಿಸಲಾಗಿದೆ) ಎಂಬಾತನ ಮೇಲೆ ಹಲ್ಲೆ ನಡೆಸಿ ಹಣ, ಕಾರು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡಿದ್ದರು.

ಹೊಸೂರಿನ ಪ್ರದೀಪ್ ನನ್ನು ವಾರದ ಹಿಂದೆ ತನ್ನ ಮನೆಗೆ ಕರೆಸಿಕೊಂಡಿದ್ದ ಯುವತಿ,  ತಾನು ಒಬ್ಬಳೇ ಇದ್ದೀನಿ. ತಂದೆ-ತಾಯಿ ದೂರದ ಪ್ರವಾಸಕ್ಕೆ ಹೋಗಿರುವುದಾಗಿ ತಿಳಿಸಿದ್ದಳು. ಪ್ರದೀಪ್ ಪ್ರಿಯಾಳನ್ನು ನಂಬಿ ಆಕೆಯನ್ನು ಭೇಟಿಯಾಗಲು ಬಂದಿದ್ದ. ಆಕೆಯ ನಾಲ್ವರು ಸ್ನೇಹಿತರು ಆತನನ್ನು ಲಾಕ್ ಮಾಡಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಆತನಿಗೆ ಥಳಿಸುವ ಮುನ್ನ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ, ನಂತರ ಆತನ ಚಿನ್ನದ ಸರ, ನಗದು ಹಾಗೂ ಕಾರನ್ನು ದೋಚಿದ್ದಾರೆ. ಅವರ ಕಾರನ್ನು ಹಿಂತಿರುಗಿಸಲು 60,000 ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. 

ಪ್ರದೀಪ್ ಹೇಗೂ ತಪ್ಪಿಸಿಕೊಂಡು ಎಸ್‌ಜಿ ಪಾಳ್ಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಿಯಾ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ತಾನು ಈ ಹಿಂದೆಯೂ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದೆ ಮತ್ತು ಇತರ ಉದ್ಯಮಿಗಳನ್ನೂ ಸುಲಿಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಕೆ ಇತರ ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದು, ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT