ಬೆಂಗಳೂರು: 30 ವರ್ಷದ ವ್ಯಕ್ತಿಯೊಬ್ಬರ ಮೇಲೆ ಆತನ ಪತ್ನಿಯ ಮಾಜಿ ಸಹೋದ್ಯೋಗಿ ಮತ್ತು ಇಬ್ಬರು ವ್ಯಕ್ತಿಗಳು ಕಬ್ಬಿಣದ ರಾಡ್ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಕನಕಪುರ ರಸ್ತೆಯಲ್ಲಿ ನಡೆದಿದೆ.
ಮಹೇಶ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಮಹೇಶ್ ಕುಮಾರ್ ಅವರು ಕನಕಪುರ ರಸ್ತೆಯ ಮರಳವಾಡಿ ನಿವಾಸಿಯಾಗಿದ್ದು, ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ಆರೋಪಿ ಮಂಜುನಾಥ್ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಮಹೇಶ್ ಪತ್ನಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಮಹೇಶ್ ಪತ್ನಿ ಈ ವಿಚಾರವನ್ನು ಪತಿಗೆ ತಿಳಿಸಿದ್ದಳು. ಬಳಿಕ ಕೆಲಸದ ಸ್ಥಳಕ್ಕೆ ತೆರಳಿದ ಮಹೇಶ್ ಮಂಜುನಾಥ್'ಗೆ ಎಚ್ಚರಿಕೆ ನೀಡಿದ್ದರು. ಇದು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿತ್ತು. ನಂತರ ಮಹೇಶ್ ತನ್ನ ಪತ್ನಿಗೆ ಕೆಲಸಕ್ಕೆ ಹೋಗದಂತೆ ಸೂಚಿಸಿದ್ದರು.
ಇದರಿಂದಾಗಿ ಮಹಿಳೆಯನ್ನು ಭೇಟಿಯಾಗಲು ಸಾಧ್ಯವಾಗದೆ ಕೋಪಗೊಂಡ ಮಂಜುನಾಥ್, ಮಹೇಶ್'ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾನೆ.
ಮಹೇಶ್ ಅವರು ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ, ಇಬ್ಬರು ವ್ಯಕ್ತಿಗಳ ಜೊತೆಗೂಡಿ ಬಂದಿರುವ ಆರೋಪಿ ಮಂಜುನಾಥ್ ರಸ್ತೆಯಲ್ಲಿ ಮಹೇಶ್ ಅವರ ಕಣ್ಣಿಗೆ ಖಾರದ ಪುಡಿ ಎರಡಿ ಕಬ್ಬಿಣದ ರಾಡ್ ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಕನಕಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಒಳಗೆ ಓಡಿ ಹೋಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.