ದಾವಣಗೆರೆ: ನಗರದ ರೇಣುಕಾ ಮಂದಿರದ ಬಳಿಯಲ್ಲಿ ಕಸ ಎಸೆಯುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ ನಂತರ ದಾವಣಗೆರೆ ಸಿಟಿ ಕಾರ್ಪೊರೇಷನ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರದಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಟ್ಟಿದ್ದು, ಪಾಲಿಕೆಯ ಮಾರ್ಷಲ್ಗಳು ಒಂದೇ ಸ್ಥಳದಲ್ಲಿ ಕಸೆ ಎಸೆಯುತ್ತಿದ್ದ ಎಂಟು ಜನರನ್ನು ಹಿಡಿದು ಅವರಿಂದ 2,700 ರೂ. ದಂಡ ವಸೂಲಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿದವರನ್ನು ಆರೋಗ್ಯ ನಿರೀಕ್ಷಕ ನಿಖಿಲ್ ನೇತೃತ್ವದ ಮಾರ್ಷಲ್ಗಳ ತಂಡವು ಹಿಡಿದಿದೆ. ತಂಡವು ಅವರನ್ನು ತಾವೇ ಎಸೆದಿದ್ದ ಕಸವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಲ್ಲದೆ, ದಂಡ ಪಾವತಿಸುವಂತೆಯೂ ಮಾಡಿದೆ. ಇವರನ್ನು ಪೂರ್ವ ಮತ್ತು ಈಶಾನ್ಯ ಭಾರತದಿಂದ ಬಂದವರು ಎನ್ನಲಾಗಿದೆ.
ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಲು ಪಾಲಿಕೆ ಜನರಿಗೆ ಅರಿವೂ ಮೂಡಿಸಿದ್ದರೂ, ಹಲವರು ಅದನ್ನು ಮಾಡುತ್ತಿಲ್ಲ. ಆದರೆ, ಪೌರಕಾರ್ಮಿಕರು ಸೋಮವಾರದಿಂದ ಪ್ರತ್ಯೇಕಿಸಿದ ಕಸವನ್ನು ಸಂಗ್ರಹಿಸುತ್ತಿದ್ದಾರೆ ಎಂದು ನಿಖಿಲ್ ಹೇಳಿದರು.
ಇದನ್ನೂ ಓದಿ: ದಾವಣಗೆರೆ: ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಯದೆ ರಾತ್ರೋರಾತ್ರಿ ಪಾಲಿಕೆ ಮುಂಭಾಗದ ಹೊಂಡಗುಂಡಿ ಮುಚ್ಚಿದ ಸ್ವಯಂಸೇವಕರು
ಜನರು ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದನ್ನು ತಡೆಯಲೆಂದೇ ಆರೋಗ್ಯ ಇಲಾಖೆಯು ತಂಡಗಳನ್ನು ರಚಿಸಿದೆ. ಈ ತಂಡಗಳು ಕಸ ಎಸೆಯುವವರನ್ನು ತಡೆಯುತ್ತವೆ ಎಂದು ಹೇಳಿದರು.
ನಗರದಲ್ಲಿ ಕಸ ಎಸೆಯುವುದನ್ನು ತಡೆಯಲು ಮುಂದಾಗಿದ್ದ ಸಮಾಜಸೇವಕ ಎಂ.ಜಿ. ಶ್ರೀಕಾಂತ್ ಮಾತನಾಡಿ, ಈಗ ತ್ಯಾಜ್ಯವನ್ನು ಪ್ರತ್ಯೇಕಿಸಿ ಅಲ್ಲಿನ ನಿವಾಸಿಗಳು ಪೌರಕಾರ್ಮಿಕರಿಗೆ ನೀಡಲಾರಂಭಿಸಿದ್ದಾರೆ ಎನ್ನುತ್ತಾರೆ.