ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟು ಎಷ್ಟು ಪ್ರತಿಮೆಗಳಿವೆ? ಮಹಾನಗರ ಪಾಲಿಕೆಯ ಬಳಿಯೂ ಈ ಬಗ್ಗೆ ಮಾಹಿತಿಯಿಲ್ಲ.
ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೀಗ ನಗರದಲ್ಲಿನ ಪ್ರತಿಮೆಗಳ ಸಂಖ್ಯೆಯನ್ನು ಎಣಿಕೆ ಮಾಡಲು ಮತ್ತು ಅವು ಕಾನೂನುಬದ್ಧವಾಗಿದೆಯೇ ಎಂದು ಪರಿಶೀಲಿಸಲು ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಇಂಜಿನಿಯರ್ಗಳಿಗೆ ನೀಡಿದೆ.
ಗಣ್ಯರ ಪ್ರತಿಮೆ ಸ್ಥಾಪಿಸಲು ಪ್ರತೀನಿತ್ಯ ಸರಾಸರಿ 8 ಅರ್ಜಿಗಳು ಬಿಬಿಎಂಪಿಗೆ ಬರುತ್ತಿರುತ್ತವೆ. ಅದರಲ್ಲಿ ಹೆಚ್ಚಿನವು ರಾಜಕಾರಣಿಗಳು ಹಾಗೂ ಪುನೀತ್ ರಾಜ್ ಕುಮಾರ, ಕೆಂಪೇಗೌಡ ಪ್ರತಿಮೆ ಸ್ಥಾಪನೆಗೆ ಗರಿಷ್ಠ ಅರ್ಜಿಗಳು ಬಂದಿವೆ.
ಇದೀಗ ನಮ್ಮ ಬಳಿ ಒಂದು ಸ್ಥಳದಲ್ಲಿ ಎಷ್ಟು ಪ್ರತಿಮೆಗಳಿವೆ ಮತ್ತು ಎಷ್ಟು ಕಾನೂನುಬದ್ಧವಾಗಿವೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಹಿಂದೆ ಬಿಬಿಎಂಪಿ ಕೌನ್ಸಿಲ್ ಅಧಿವೇಶನದಲ್ಲಿ ಪ್ರತಿಮೆಗಳ ಸ್ಥಾಪಿಸಲು ಅರ್ಜಿಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೌನ್ಸಿಲ್ ಆಗಿಲ್ಲ, ಹೀಗಾಗಿ ಪ್ರತಿಮೆಗಳು ಎಷ್ಟಿವೆ ಎಂಬುದಕ್ಕೆ ನಮ್ಮ ಬಳಿ ದಾಖಲೆ, ಮಾಹಿತಿಗಳಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಪ್ರತಿಮೆ ಎಣಿಕೆ ಮಾಡಲು ನಿರ್ಧರಿಸಲಾಗಿದ್ದು, ಎಲ್ಲಾ ವಲಯ ಕಚೇರಿಗಳು, ವಾರ್ಡ್ಗಳಲ್ಲಿರುವ ಕಡಗಳ ಹುಡುಕಲು ಹಾಗೂ ಮಾಹಿತಿ ಸಂಗ್ರಹಿಸಲು ನಿರ್ದೇಶಿಸಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಎಂಜಿನಿಯರ್ಗಳಿಗೆ ಫುಟ್ಪಾತ್ಗಳನ್ನು ತೆರವುಗೊಳಿಸುವಂತೆ ಸೂಚಿಸಿರುವುದರಿಂದ ಈ ಕಸರತ್ತು ಮಹತ್ವದ್ದಾಗಿದೆ, ಆದರೆ, ಇವುಗಳಲ್ಲಿ ಹಲವು ಪ್ರತಿಮೆಗಳು ಪಾದಚಾರಿ ಮಾರ್ಗಗಳ ಮಧ್ಯದಲ್ಲಿರುವುದು ಗಮನಾರ್ಹ ವಿಚಾರವಾಗಿದೆ.
ಪ್ರತಿಮೆ ಎಣಿಕೆ ಮಾಡಲು ಮುಂದಾಗಿರುವ ಬಿಬಿಎಂಪಿಯ ಇಂಜಿನಿಯರಿಂಗ್ ಮತ್ತು ಕಂದಾಯ ವಿಭಾಗಗಳು ಇದೀಗ ಹೆಚ್ಚಿನ ಸಮಯದಲ್ಲಿ ಕೆಲಸ ಮಾಡುತ್ತಿದ್ದು, ಈ ಪ್ರತಿಮೆಗಳ ಸ್ಥಾಪನೆಗೆ ಅನುಮತಿ ನೀಡಿದವರಾರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಕೆಂಪೇಗೌಡ ಪ್ರತಿಮೆ: ಸಾರ್ವಜನಿಕರಿಗೆ ನಿರ್ಬಂಧ? ರಾಜಕಾರಣಿಗಳಿಗೆ ಮಾತ್ರ ಮುಕ್ತ ಪ್ರವೇಶವೇ?
“ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಟ್ರಾಫಿಕ್ ಜಂಕ್ಷನ್ಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿರುವುದು ಕಂಡು ಬಂದಿದೆ. ಇದು ವಾಹನ ಚಾಲಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಅವುಗಳನ್ನು ತೆಗೆದುಹಾಕಬೇಕಾದರೆ, ನಾವು ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಇದು ಸೂಕ್ಷ್ಮ ವಿಷಯವಾಗಿರುವುದರಿಂದ, ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.