ರಾಜ್ಯ

ಚಿಕ್ಕಮಗಳೂರು: ಚಿನ್ನದ ವ್ಯಾಪಾರಿಯಿಂದ ಸುಲಿಗೆ ಮಾಡಿದ ನಾಲ್ವರು ಪೊಲೀಸರು ಅಮಾನತು

Ramyashree GN

ಚಿಕ್ಕಮಗಳೂರು: ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಡಿಯಲ್ಲಿ ಸಿಲುಕಿಸುವುದಾಗಿ ಬೆದರಿಸಿ ಚಿನ್ನದ ವ್ಯಾಪಾರಿಯೊಬ್ಬರಿಂದ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಜಿಲ್ಲೆಯ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಅಮಾನತುಗೊಂಡ ನಾಲ್ವರನ್ನು ಅಜ್ಜಂಪುರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲಿಂಗರಾಜು, ಕಾನ್‌ಸ್ಟೆಬರ್‌ಗಳಾದ ಧನಪಾಲ್ ನಾಯಕ್, ಓಕಾಂರಮೂರ್ತಿ ಮತ್ತು ಶರತ್ ರಾಜ್ ಎಂದು ಗುರುತಿಸಲಾಗಿದೆ.

ಮೇ 11 ರಂದು ಆರೋಪಿ ಪೊಲೀಸರು ದಾವಣಗೆರೆಯಲ್ಲಿ ಚಿನ್ನದ ವ್ಯಾಪಾರಿ ರೋಹಿತ್ ಸಂಕ್ಲಾ ಅವರ ಕಾರನ್ನು ತಡೆದಿದ್ದರು. ಅವರು ಬೇಲೂರಿಗೆ 2.450 ಕೆ.ಜಿ ಚಿನ್ನಾಭರಣವನ್ನು ಸಾಗಿಸುತ್ತಿದ್ದರು. ಈವೇಳೆ ತಪಾಸಣೆ ನಡೆಸಿದಾಗ ಚಿನ್ನವನ್ನು ಪತ್ತೆ ಹಚ್ಚಿದ ಪೊಲೀಸರು, 10 ಲಕ್ಷ ರೂಪಾಯಿ ಲಂಚ ನೀಡದಿದ್ದರೆ ಅವರ ವಿರುದ್ಧ ಚಿನ್ನ ಕಳ್ಳಸಾಗಣೆ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದರು.

ಬಳಿಕ ಸಂಕ್ಲಾ ಎಂಬುವವರಿಂದ 5 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದರು ಮತ್ತು ಅವರನ್ನು ಅಲ್ಲಿಂದ ಕಳುಹಿಸಿದ್ದರು.

ಈ ಬಗ್ಗೆ ಚಿನ್ನದ ವ್ಯಾಪಾರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಇಲಾಖಾ ವಿಚಾರಣೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗಿದೆ.

SCROLL FOR NEXT