ರಾಜ್ಯ

ಸ್ಕೂಟರ್'ಗೆ ಬಿಎಂಟಿಸಿ ಬಸ್ ಡಿಕ್ಕಿ: 16 ವರ್ಷದ ಬಾಲಕಿ ದುರ್ಮರಣ

Manjula VN

ಬೆಂಗಳೂರು: ಕೆಆರ್ ಪುರಂನ ಹಳೆ ಮದ್ರಾಸ್ ರಸ್ತೆಯಲ್ಲಿ ಮಂಗಳವಾರ ವೇಗವಾಗಿ ಬಂದ ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 16 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಲಯಶ್ರೀ ವಿ ಮೃತ ಬಾಲಕಿಯಾಗಿದ್ದಾಳೆ. ಘಟನೆಯಲ್ಲಿ ಬಾಲಕಿ ಸಹೋದರ ಯಶ್ವಿನ್ (11) ಮತ್ತು ತಾಯಿ ಪ್ರಿಯದರ್ಶಿನಿ (45)ಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಪ್ರಿಯದರ್ಶಿನಿ ಅವರು ತಮ್ಮ ಇಬ್ಬರು ಮಕ್ಕಳಾದ ಲಯಶ್ರೀ ಮತ್ತು ಯಶ್ವಿನ್ ಅವರನ್ನು ಸ್ಕೂಟರ್‌ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದಾಗ ಬೆಳಿಗ್ಗೆ 7.30 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಳೇ ಮದ್ರಾಸ್ ರಸ್ತೆಯಲ್ಲಿ, ಸರ್ವಿಸ್ ರಸ್ತೆಯಿಂದ ಭಟ್ಟರಹಳ್ಳಿ ತಲುಪಲು ಬಲ ತಿರುವು ತೆಗೆದುಕೊಂಡಾಗ ಹಿಂದಿನಿಂದ ಬಿಎಂಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರಿಯದರ್ಶಿನಿ ಮತ್ತು ಯಶ್ವಿನ್ ಅವರ ಎಡಭಾಗಕ್ಕೆ ಬಿದ್ದರೆ, ಲಯಶ್ರೀ ಬಲಕ್ಕೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ, ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

 ಬಸ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಮಹೇಂದ್ರನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಕೆಆರ್ ಪುರಂ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 22 ರಂದು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 22 ವರ್ಷದ ಎಂಎಸ್‌ಸಿ ವಿದ್ಯಾರ್ಥಿನಿ ಶಿಲ್ಪಾ ಶ್ರೀ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು.

SCROLL FOR NEXT