ರಾಜ್ಯ

ಮೈದಾನದಲ್ಲಿ ಶಾಲೆ ನಿರ್ಮಿಸಲು ಬಿಬಿಎಂಪಿ ಮುಂದು: ಅಧಿಕಾರಿಗಳ ವಿರುದ್ಧ ಆರ್‌ಆರ್‌ನಗರ ನಿವಾಸಿಗಳ ಪ್ರತಿಭಟನೆ

Manjula VN

ಬೆಂಗಳೂರು: ರಾಜರಾಜೇಶ್ವರಿನಗರದ 1.6 ಎಕರೆ ವಿಸ್ತೀರ್ಣದ ಕೆಂಪೇಗೌಡ ಆಟದ ಮೈದಾನದಲ್ಲಿ ಶಾಲೆ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ಥಳೀಯ ನಿವಾಸಿಗಳು ವಿರೋಧಿಸಿದ್ದು, ಬುಧವಾರ ಪ್ರತಿಭಟನೆ ನಡೆಸಿದರು.

ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ ನಿವಾಸಿಗಳು ಭಿತ್ತಿಪತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು,

ಮಕ್ಕಳು ಮತ್ತು ಯುವಕರು ಕ್ರೀಡೆಯಲ್ಲಿ ಆಸಕ್ತಿ ಹೊಂದಲು ಮೈದಾನವು ಏಕೈಕ ಮಾರ್ಗವಾಗಿದೆ, ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಆರ್‌ಆರ್ ನಗರವು 155 ಎಕರೆ ಪ್ರದೇಶದಲ್ಲಿ ಹರಡಿರುವ ವಸತಿ ಪ್ರದೇಶವಾಗಿದೆ. ಜೀವವೈವಿಧ್ಯ-ಸಮೃದ್ಧ ಪ್ರದೇಶದಲ್ಲಿ 1.45 ಲಕ್ಷ ನಿವಾಸಿಗಳಿದ್ದಾರೆ. ಇಲ್ಲಿ ಸಾಕಷ್ಟು ಶಾಲೆಗಳಿವೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಆಟದ ಮೈದಾನದಲ್ಲಿ ಶಾಲೆ ನಿರ್ಮಿಸುವ ಯೋಜನೆ ಒಳ್ಳೆಯದಲ್ಲ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಈ ಮೈದಾನವನ್ನು ಕ್ರೀಡಾ ಚಟುವಟಿಕೆಗಳಿಗೆ ಬಿಟ್ಟುಕೊಡಬೇಕು ಮತ್ತು ನಾಗರಿಕ ಸೌಕರ್ಯದ ಸ್ಥಳದಲ್ಲಿ ಎಲ್ಲಾ ಸೌಕರ್ಯಗಳೊಂದಿಗೆ ಆಧುನಿಕ ಶಾಲೆಯನ್ನು ನಿರ್ಮಿಸಬೇಕು ಎಂದು ನಿವಾಸಿಗಳು ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ಪ್ರದೇಶದಲ್ಲಿ ಆಯ್ಕೆ ಮಾಡಲು 20 ಕ್ಕಿಂತ ಹೆಚ್ಚು CA ಸೈಟ್‌ಗಳಿವೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಎಲ್ಲಾ ವಸತಿ ಪ್ರದೇಶಗಳಲ್ಲಿ ಆಟದ ಮೈದಾನಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಮಹಿಳಾ ಪ್ರತಿಭಟನಾಕಾರರೊಬ್ಬರು ಹೇಳಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮುಖ್ಯ ಇಂಜಿನಿಯರ್ (ಆರ್‌ಆರ್ ನಗರ ವಲಯ) ವಿಜಯ್ ಕುಮಾರ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ಬಗ್ಗೆ ಸ್ಪಷ್ಟನೆ ಪಡೆಯಲು ಬಿಬಿಎಂಪಿ ವಲಯ ಆಯುಕ್ತರೊಂದಿಗೆ ಸಭೆ ನಡೆಸಲು ಮಂಗಳವಾರದವರೆಗೆ ಸಮಯ ಕೋರಿದರು.

ಯೋಜನೆ ರೂಪಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ ಎಂದು ಮುಖ್ಯ ಎಂಜಿನಿಯರ್ ತಿಳಿಸಿದರು.

SCROLL FOR NEXT