ರಾಜ್ಯ

ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವು: ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಘೋಷಣೆ

Sumana Upadhyaya

ದೊಡ್ಡಬಳ್ಳಾಪುರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಕಸದ ಲಾರಿ ಹಾಗೂ ಬೈಕ್‌ ನಡುವೆ ಅಪಘಾತವಾಗಿ ಬೈಕ್‌ನಲ್ಲಿದ್ದ ಮೃತಪಟ್ಟ ಇಬ್ಬರು ಯುವಕರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ತುಮಕೂರು-ದಾಬಸ್‌ ಪೇಟೆ ಹೆದ್ದಾರಿಯ ಹುಲಿಕುಂಟೆ ಗ್ರಾಮದ ಬಳಿ ಪ್ರಕರಣ ನಿನ್ನೆ ನಡೆದಿತ್ತು. ದೊಡ್ಡಬೆಳವಂಗಲ ಹೋಬಳಿಯ ಮರಳುಕುಂಟೆ ಗ್ರಾಮದ ಯುವಕರಾದ ಮಾರುತಿ (28) ಮತ್ತು ಮಹೇಶ್‌(30) ಮೃತಪಟ್ಟ ಯುವಕರಾಗಿದ್ದಾರೆ.

ತಾಲೂಕಿನ ಚಿಗರೇನಹಳ್ಳಿ ಬಳಿಯಿರುವ ಬಿಬಿಎಂಪಿ ಕಸದ ಡಂಪ್‌ ಯಾರ್ಡ್‌ ಎಂಎಸ್‌ ಜಿಪಿ ಘಟಕಕ್ಕೆ ಕಸವನ್ನು ಹಾಕಿ ವಾಪಸ್ ಹೋಗುತ್ತಿದ್ದ ಲಾರಿ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿದೆ. ಮಧುರೆಯಲ್ಲಿ ಶನಿಮಹಾತ್ಮ ಸ್ವಾಮಿಯ ದರ್ಶನ ಮುಗಿಸಿ ಮುಡಿಕೊಟ್ಟ ಯುವಕರು ವಾಪಸ್‌ ಸ್ವಗ್ರಾಮಕ್ಕೆ ಬರುವಾಗ ದುರ್ಘಟನೆ ನಡೆದಿದೆ.

ಸ್ಥಳಕ್ಕೆ ನಿನ್ನೆ ಶಾಸಕ ವೆಂಕಟರಮಣಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದರು. ಬಿಬಿಎಂಪಿ ಕಸದ ಘಟಕವನ್ನು ಮುಚ್ಚುವಂತೆ ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪದೇ ಪದೇ ಕಸದ ಘಟಕದಿಂದ ತಾಲೂಕಿನ ಜನ ಪ್ರಾಣ ತೆತ್ತುತ್ತಿದ್ದಾರೆ. ಕಸದ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರವೂ ಹದಗೆಟ್ಟಿದೆ. ನೀರಿನ ಮೂಲವು ಸಂಪೂರ್ಣ ಕಲುಷಿತಗೊಂಡಿದೆ. ಅಪಘಾತ ಪ್ರಕರಣಗಳಿಂದ ತಾಲೂಕಿನ ಜನತೆ ಬೇಸತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಸರಕಾರ ಶೀಘ್ರವಾಗಿ ಕಸದ ಘಟಕವನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ. 

ಮೂರು ತಿಂಗಳ ಹಿಂದಷ್ಟೇ ಮೂಗಿನೇಹಳ್ಳಿ ಕ್ರಾಸ್‌ ಬಳಿ ಬಿಬಿಎಂಪಿ ಕಸದ ಲಾರಿಗೆ ಒಬ್ಬ ಯುವಕ ಬಲಿಯಾಗಿದ್ದ. 

SCROLL FOR NEXT