ಬೆಂಗಳೂರು: ಇದೇ 23 ರಿಂದ ಮೂರು ದಿನ ನಡೆಯಲಿರುವ ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ' ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ರಾಜ್ಯಮಟ್ಟದಲ್ಲಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದ್ದು, ಕಿತ್ತೂರು ಪ್ರಾಧಿಕಾರಕ್ಕೆ 50 ಕೋಟಿ ಅನುದಾನ ನೀಡಲಾಗಿದೆ. ಇದೇ ವರ್ಷ ಸುವರ್ಣ ಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು, ಇರುವ ಅರಮನೆಯನ್ನು ನೈಜವಾಗಿಟ್ಟು, ಅದರ ಪಕ್ಕದಲ್ಲೇ ಹೊಸ ಅರಮನೆ ನಿರ್ಮಿಸಲಾಗುವುದು ಎಂದರು.
ಮುಂದಿನ ತಿಂಗಳು ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಉದ್ಘಾಟಿಸಲಾಗುವುದು, ಕಿತ್ತೂರು ರಾಣಿ ಚೆನ್ನಮ್ಮನ ಬೈಲಹೊಂಗಲವನ್ನು ಅಭಿವೃದ್ಧಿಪಡಿಸಲಾಗುವುದು, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಬೆಳವಾಡಿ ಮಲ್ಲಮ್ಮ, ಓಬವ್ವ ಅವರನ್ನು ನೆನಪನಲ್ಲಿಡುವ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ದೇಶಕ್ಕೆ ಹೋರಾಟ ಮಾಡಿದವರ ಸ್ಮಾರಕವನ್ನು ಸರ್ಕಾರ ಹಂತ ಹಂತವಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.