ರಾಜ್ಯ

ಭಾರತ್ ಜೋಡೊ ಯಾತ್ರೆಯಲ್ಲಿ ಗೌರಿ ಲಂಕೇಶ್ ತಾಯಿ ಇಂದಿರಾ, ಕವಿತಾ ಲಂಕೇಶ್ ಭಾಗಿ

Srinivasamurthy VN

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋಯಾತ್ರೆಯಲ್ಲಿ ಖ್ಯಾತ ಪತ್ರಕರ್ತೆ ದಿ.ಗೌರಿ ಲಂಕೇಶ್ ತಾಯಿ ಇಂದಿರಾ ಮತ್ತು ಸಹೋದರಿ ಕವಿತಾ ಲಂಕೇಶ್ ಭಾಗಿಯಾಗಿದ್ದರು.

2017 ರಲ್ಲಿ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಮತ್ತು ಕವಿತಾ ಲಂಕೇಶ್ ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆ ಭುವನಹಳ್ಳಿಯಲ್ಲಿ ಭಾರತ್ ಜೋಡೋ ಯಾತ್ರೆ ಪ್ರಯುಕ್ತ ರಾಹುಲ್ ಜೊತೆ ಗೌರಿ ಲಂಕೇಶ್‌ ತಾಯಿ ಇಂದಿರಾ ಲಂಕೇಶ್, ತಂಗಿ ಕವಿತಾ ಲಂಕೇಶ್​ ಹೆಜ್ಜೆಹಾಕಿದರು. ಪಠ್ಯಪುಸ್ತಕಗಳಲ್ಲಿ ಚರಿತ್ರೆ ಬದಲಾವಣೆ ಮಾಡುವುದು ಒಳ್ಳೆಯದಲ್ಲ. ಇತಿಹಾಸವನ್ನೇ ತೆಗೆಯೋದು ಬಹಳ ಡೇಂಜರ್. ಸಮಾಜವನ್ನು ಅರ್ಥ ಮಾಡಿಕೊಂಡು ಬದುಕಲು ಚರಿತ್ರೆ ಬದಲಾಯಿಸಬಾರದು. ಓಟು ಬದಲಾವಣೆ ಆಗುತ್ತದೆ ಇಲ್ಲವೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ತುಂಬಾ ಒಡಕಾಗುತ್ತಿದೆ. ವಿಭಜನೆಯ ರಾಜಕೀಯ ಎಲ್ಲ ಕಡೆ ನಡೆಯುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ದ್ವೇಷ ಬರುವಂತೆ ಮಾಡುತ್ತಿದೆ. ಶಿವಮೊಗ್ಗ ಪ್ರಕರಣ, ಹಿಜಾಬ್ ವಿಚಾರ ಎಲ್ಲವೂ ದ್ವೇಷ ಬೆಳೆಯುವಂತೆ ಮಾಡುತ್ತಿದೆ. ಮನುಷ್ಯತ್ವ ಕಳೆದು ಹೋಗುತ್ತಿದೆ ಅದು ವಾಪಸ್ ಬರಬೇಕು ಎಂದರು.

ಇದೇ ವಿಚಾರವಾಗಿ ಟ್ವಿಟರ್ ಖಾತೆಯಲ್ಲಿ ಫೋಟೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ''ಗೌರಿ ಸತ್ಯದ ಪರ ನಿಂತರು ಗೌರಿ ಧೈರ್ಯವಾಗಿ ನಿಂತರು ಗೌರಿ ಸ್ವಾತಂತ್ರ್ಯಕ್ಕಾಗಿ ನಿಂತರು ಭಾರತದ ನಿಜವಾದ ಆತ್ಮವನ್ನು ಪ್ರತಿನಿಧಿಸುವ ಗೌರಿ ಲಂಕೇಶ್ ಮತ್ತು ಅವರಂತಹ ಅಸಂಖ್ಯಾತ ಇತರರ ಪರವಾಗಿ ನಾನು ನಿಲ್ಲುತ್ತೇನೆ. ಭಾರತ್ ಜೋಡೋ ಯಾತ್ರೆ ಅವರ ಧ್ವನಿ, ಅದನ್ನು ಎಂದಿಗೂ ಮೌನಗೊಳಿಸಲು ಸಾಧ್ಯವಿಲ್ಲ!'' ಎಂದು ಬರೆದಿದ್ದಾರೆ. 

ಭಾರತ್ ಜೋಡೊ ಪಾದಯಾತ್ರೆಯೂ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆಯುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದಾರೆ. ರಾಹುಲ್ ಜೊತೆ ಕೆ.ಸಿ.ವೇಣುಗೋಪಾಲ್, ಚಲುವನಾರಾಯಣಸ್ವಾಮಿ, ಧ್ರುವನಾರಾಯಣ ಸೇರಿ ಹಲವರು ಹೆಜ್ಜೆ ಹಾಕಿದ್ದಾರೆ. ಇಂದು (ಶುಕ್ರವಾರ) ಕೆ.ಮಲ್ಲೇನಹಳ್ಳಿಯಿಂದ ಪಾದಯಾತ್ರೆ ಶುರುವಾಗಿದೆ. ನಾಗಮಂಗಲದ ವಕೀಲರು ರಾಹುಲ್ ಗಾಂಧಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ ಫೋಟೊ, ಟಿಪ್ಪು ಸುಲ್ತಾನ್ ಪುಸ್ತಕ, ಕುವೆಂಪು ಪುಸ್ತಕವನ್ನು ಇವರು ರಾಹುಲ್​ಗೆ ಉಡುಗೊರೆಯಾಗಿ ನೀಡಲಿದ್ದಾರೆ.

SCROLL FOR NEXT