ರಾಜ್ಯ

ಹಂಪಿ: ಯುನೆಸ್ಕೋ ತಾಣಗಳಲ್ಲಿ ಸರ್ಕಾರಿ ಅಧಿಕಾರಿಗಳಿಂದ ನಿಯಮಗಳ ಉಲ್ಲಂಘನೆ!

Srinivas Rao BV

ಹೊಸಪೇಟೆ: ಹಂಪಿಯಲ್ಲಿ ಯುನೆಸ್ಕೋ ಸಂರಕ್ಷಿತ ತಾಣಗಳಲ್ಲಿ ಸರ್ಕಾರಿ ಅಧಿಕಾರಿಗಳೇ ಬೃಹತ್ ವಾಹನಗಳಲ್ಲಿ ಸಂಚರಿಸುತ್ತಿರುವುದು ನಿಯಮ ಉಲ್ಲಂಘನೆಯಾಗಿದೆ.

ಹಂಪಿಯ ವಿಜಯ ವಿಠಲ ದೇವಾಲಯ ಸೇರಿದಂತೆ ಹಲವು ಪ್ರದೇಶಗಳನ್ನು ನಾನ್-ವೈಬ್ರೇಷನ್ ಜೋನ್ ಎಂದು ಘೋಷಿಸಲಾಗಿದ್ದು ನಿಯಮಗಳ ಪ್ರಕಾರ ದೇವಾಲಯದ ಆವರಣಗಳಲ್ಲಿ ಅಡ್ಡಾಡುವುದಕ್ಕೆ ಕೇವಲ ಬ್ಯಾಟರಿ ಚಾಲಿತ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದರೆ, ಕೆಲವು ಸರ್ಕಾರಿ ಅಧಿಕಾರಿಗಳು ಹಾಗು ಅವರ ಸಂಬಂಧಿಕರು ಸಂರಕ್ಷಿತ ಪ್ರದೇಶಗಳಲ್ಲಿ ಬೃಹತ್ ವಾಹನಗಳನ್ನು ಬಳಸುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪುರಾತನ, ಪ್ರಾಚೀನ ಸ್ಮಾರಕಗಳಿಗೆ ಹಾನಿಯಾಗುವುದನ್ನು ತಡೆಗಟ್ಟಲು ಹಂಪಿಯ ಕೆಲವು ಪ್ರದೇಶಗಳನ್ನು ನಾನ್ ವೈಬ್ರೇಷನ್ ಜೋನ್ ಎಂದು ಗುರುತಿಸಲಾಗಿತ್ತು. ಈ ಪೈಕಿ ವಿಜಯ ವಿಠಲ ದೇವಾಲಯವೊಂದಾಗಿದೆ. ಹಂಪನಿಯ ಸ್ಥಳೀಯ ನಿವಾಸಿ ಮಂಜುನಾಥ್ ಪಿ ನಿಯಮ ಉಲ್ಲಂಘನೆಯ ಬಗ್ಗೆ ಮಾತನಾಡಿದ್ದು, "ಈ ಪ್ರದೇಶ ಯುನೆಸ್ಕೋ ನಿಂದ ಜಾಗತಿಕ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ ಹಾಗೂ ಎಎಸ್ಐ ನಿಂದ ಸಂರಕ್ಷಿತ ಪ್ರದೇಶವಾಗಿದೆ. ಆದರೆ ಸರ್ಕಾರಿ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ".

"ಗೆಜ್ಜಾಲ್ ಮಂಟಪ ದಿಂದ ವಿಜಯ ವಿಠಲ ದೇವಾಲಯವರೆಗೂ ಬೃಹತ್ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಳೆದ ವರ್ಷ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿದ್ದಾಗಲೂ ಅವರು ಎಲೆಕ್ಟ್ರಿಕ್ ವಾಹನಗಳನ್ನು ಬಳಸಿದ್ದರು, ನಿರ್ಬಂಧಿತ ವಲಯದಲ್ಲಿ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಬಾರದು" ಎಂದು ಹೇಳಿದ್ದಾರೆ. 

SCROLL FOR NEXT