ರಾಜ್ಯ

ಮದರಸಾದಲ್ಲಿ ಹಿಂದೂಗಳಿಂದ ಪೂಜೆ, ಬೀದರ್ ಉದ್ವಿಗ್ನ; 9 ಮಂದಿ ವಿರುದ್ಧ ಕೇಸ್ ದಾಖಲು

Lingaraj Badiger

ಬೀದರ್: ಹಿಂದೂಪರ ಸಂಘಟನೆಗಳ ದೊಡ್ಡ ಗುಂಪೊಂದು ಗುರುವಾರ ಬೆಳಗ್ಗೆ ನಗರದ 15ನೇ ಶತಮಾನದ ಐತಿಹಾಸಿಕ ಮೊಹಮ್ಮದ್ ಗವಾನ್ ಮಸೀದಿ ಹಾಗೂ ಮದರಸಾಗೆ ನುಗ್ಗಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ ಪೂಜೆ ಸಲ್ಲಿಸಿದ ನಂತರ ಬೀದರ್ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬೀದರ್ ಪೊಲೀಸರು ಒಂಬತ್ತು ಮಂದಿಯ ವಿರುದ್ಧ ಕೇಸ್ ದಾಖಲಿಸದ್ದಾರೆ ಎಂದು ವರದಿಗಳು ತಿಳಿಸಿವೆ. ಐತಿಹಾಸಿಕ ಸ್ಮಾರಕದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮಹ್ಮದ್ ಗವಾನ್ ಸ್ಮಾರಕದ ಆವರಣದಲ್ಲಿರುವ ಮದರಸಾ ಮತ್ತು ಮಸೀದಿಯ ಮುಂಭಾಗದಲ್ಲಿ ಭವಾನಿ ದೇವಿಯ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ಗುಂಪೊಂದು ಮದರಸಾ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೇಟ್ ಒಡೆದು ಮದರಸಾ ಪ್ರವೇಶಿಸಿದ ಗುಂಪು ಒಳಗೆ ಪ್ರಾರ್ಥನೆ ಸಲ್ಲಿಸಿ ಮತ್ತು ಘೋಷಣೆಗಳನ್ನು ಕೂಗಿದೆ.

ಸಂರಕ್ಷಿತ ಸ್ಮಾರಕದ ಬೀಗ ಮುರಿದು ಒಳ ನುಗ್ಗಿದ ಹಿಂದೂ ಕಾರ್ಯಕರ್ತರು, ಜೈ ಶ್ರೀರಾಮ್ ಮತ್ತು ಜೈ ಹಿಂದೂ ರಾಷ್ಟ್ರ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ ಕಟ್ಟಡದ ಒಂದು ಮೂಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಖಂಡಿಸಿ ಬೀದರ್‌ನಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು "ಉಗ್ರರು ಗೇಟ್ ಬೀಗವನ್ನು ಮುರಿದು ಐತಿಹಾಸಿಕ ಮಸೀದಿಯನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

"ಇದಕ್ಕೆ ನೀವು ಹೇಗೆ ಅವಕಾಶ ನೀಡುತ್ತೀರಿ? ಬಿಜೆಪಿ ಕೇವಲ ಮುಸ್ಲಿಮರನ್ನು ಕೀಳಾಗಿ ನೋಡುವುದಕ್ಕೆ ಇಂತಹ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ" ಎಂದು ಓವೈಸಿ ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT