ರಾಜ್ಯ

ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಮೇಲೆ ನಕಾರಾತ್ಮಕ ಪ್ರಚಾರದ ಕರಿ ನೆರಳು!

Ramyashree GN

ಬೆಂಗಳೂರು: ನವೆಂಬರ್ 2 ರಿಂದ 4 ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕರ್ನಾಟಕ ರೆಡ್ ಕಾರ್ಪೆಟ್ ಹಾಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುತ್ತಿರುವ ನಕಾರಾತ್ಮಕ ಪೋಸ್ಟ್‌ಗಳು ಮತ್ತು ಜಾಹೀರಾತುಗಳ ಮಿಂಚಿನದಾಳಿ ಅಂತರರಾಷ್ಟ್ರೀಯ ಹೂಡಿಕೆ ಜಗತ್ತನ್ನು ಬೆಚ್ಚಿಬೀಳಿಸಿದೆ.

ದೇಶದಲ್ಲಿ (ಭಾರತ) ರಾಜಕೀಯ ಮತ್ತು ವ್ಯಾಪಾರದ ವಾತಾವರಣವು ಅನುಕೂಲಕರವಾಗಿಲ್ಲ ಎಂದು ಹೇಳುವಂತ ವಿದೇಶಿ ದಿನಪತ್ರಿಕೆಯಲ್ಲಿನ ಜಾಹೀರಾತು ಹೂಡಿಕೆದಾರರನ್ನು ಎಚ್ಚರಿಸಲು ಪ್ರಯತ್ನಿಸುತ್ತದೆ.

'ಪ್ರಧಾನಿ ಮೋದಿ ಸರ್ಕಾರ ಅಧಿಕಾರಿಗಳು ರಾಜಕೀಯ ಮತ್ತು ವ್ಯಾಪಾರ ಪ್ರತಿಸ್ಪರ್ಧಿಗಳನ್ನು ಹಣಿಯಲು ದೇಶದ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿಕೊಂಡು ಕಾನೂನಿನ ನಿಯಮಗಳನ್ನು ನಾಶಪಡಿಸಿದ್ದಾರೆ ಮತ್ತು ಹೂಡಿಕೆದಾರರಿಗೆ ಭಾರತವನ್ನು ಅಸುರಕ್ಷಿತವಾಗಿಸಿದ್ದಾರೆ. ನೀವು ಭಾರತದಲ್ಲಿ ಹೂಡಿಕೆದಾರರಾಗಿದ್ದರೆ, ನೀವು ಮುಂದಿನವರಾಗಿರಬಹುದು.... ಮೋದಿಯವರ ಆಳ್ವಿಕೆಯಲ್ಲಿ ಕಾನೂನಿನ ಕುಸಿತವು ಭಾರತವನ್ನು ಹೂಡಿಕೆ ಮಾಡಲು ಅಪಾಯಕಾರಿ ಸ್ಥಳವನ್ನಾಗಿ ಮಾಡಿದೆ' ಎಂದು ಪೋಸ್ಟ್ ಹೇಳುತ್ತದೆ.

ಅನೇಕ ಕೈಗಾರಿಕೋದ್ಯಮಿಗಳು ಮತ್ತು ಪ್ರಮುಖ ನಾಯಕರು ಬೆಂಗಳೂರಿಗೆ ಪ್ರಯಾಣ ಕೈಗೊಳ್ಳಲು ಯೋಜನೆಗಳನ್ನು ರೂಪಿಸುತ್ತಿರುವ ಹೊತ್ತಲ್ಲಿ ಈ ಕಳವಳ ವ್ಯಕ್ತವಾಗಿದೆ. ತಜ್ಞರು ಇದರಿಂದಾಗುವ ನಷ್ಟದ ಬಗ್ಗೆ ಚರ್ಚಿಸುತ್ತಿದ್ದರೆ, ಕೈಗಾರಿಕಾ ಸಚಿವ ಎನ್. ಮುರುಗೇಶ್ ನಿರಾಣಿ, 'ಇದು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರುವುದಿಲ್ಲ' ಎಂದಿದ್ದಾರೆ.

ಟಿಎನ್ಐಇ ಜೊತೆಗೆ ಮಾತನಾಡಿದ ಅವರು, 'ನಾವು ನಮ್ಮ ಕೆಲಸವನ್ನು ಮಾಡಿದ್ದೇವೆ. ಹೂಡಿಕೆದಾರರಿಗೆ ಆಸಕ್ತಿ ಇಲ್ಲದಿದ್ದರೆ, ಅವರು ನಮ್ಮನ್ನೇ ಮೊದಲು ಏಕೆ ಭೇಟಿಯಾಗುತ್ತಿದ್ದರು?ನಮ್ಮ ಸಂಭಾವ್ಯ ಹೂಡಿಕೆದಾರರಿಂದ ನಾವು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಇದರಿಂದ ಕರ್ನಾಟಕದಲ್ಲಿ ಹೂಡಿಕೆಗೆ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ' ಎಂದಿದ್ದಾರೆ.

ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿ, 'ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳು ಹೇಳಿಕೊಳ್ಳುವುದಕ್ಕಿಂತ ಇಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಮಹದೇವಪುರ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಅನೇಕ ಅವಕಾಶಗಳು ಕೈತಪ್ಪಿವೆ. ಇದು ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದರ ಸೂಚಕವಾಗಿದೆ. ಕಾರ್ಪೊರೇಟ್‌ಗಳಿಗೆ ಈಗಿನ ಸರ್ಕಾರದ ಬಗ್ಗೆ ಸ್ವಲ್ಪವೂ ಗೌರವವಿಲ್ಲ' ಎಂದಿದ್ದಾರೆ.

‘ರಾಜ್ಯದಲ್ಲಿ ಭೂಮಿಗೆ ಅತ್ಯಂತ ದುಬಾರಿ ಬೆಲೆ’

'ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವ ‘ಉತ್ತಮ ನಿರೀಕ್ಷೆಗಳ’ ಬಗ್ಗೆ ಕೆಲವು ಸಂಶಯಾಸ್ಪದ ವ್ಯಕ್ತಿಗಳು ಆಸಕ್ತ ಉದ್ಯಮಿಗಳಿಗೆ ಮಾಹಿತಿ ನೀಡಿರುವ ಬಗ್ಗೆ ನಾನು ಕೇಳಿದ್ದೇನೆ. ಇದು ನಮ್ಮ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವುದಿಲ್ಲವೇ?’ ತಮಿಳುನಾಡು ಧರ್ಮಪುರಿ-ಕೃಷ್ಣಗಿರಿ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡುತ್ತಿದೆ. ಅಲ್ಲಿ ಎಕರೆಗೆ 25 ಲಕ್ಷ ರೂ.ಗೆ ಭೂಮಿ ಲಭ್ಯವಿದೆ. ಆದರೆ, ಇಲ್ಲಿ ಭೂಮಿಗೆ ಅತ್ಯಧಿಕ ವೆಚ್ಚವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

SCROLL FOR NEXT