ರಾಜ್ಯ

ಬೆಂಗಳೂರು: ರಸ್ತೆಗುಂಡಿ ತಪ್ಪಿಸಲು ಹೋಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು, ಬಸ್ ಚಾಲಕ ಬಂಧನ

Sumana Upadhyaya

ಬೆಂಗಳೂರು: ನಗರದ ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ಕೆಎಸ್ ಆರ್ ಟಿಸಿ ಬಸ್ಸು ಹರಿದು ಗಂಭೀರ ಗಾಯಗೊಂಡಿದ್ದ ಉಮಾದೇವಿ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.

ಸುಜಾತಾ ಥಿಯೇಟರ್​ ಬಳಿ ಉಮಾದೇವಿಯವರು ತಮ್ಮ ಮಗಳು ವನಿತಾ ಜೊತೆ ಹೋಂಡಾ ಆಕ್ಟಿವಾದಲ್ಲಿ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆಗುಂಡಿ ಕಂಡುಬಂದು ತಕ್ಷಣ ಬ್ರೇಕ್ ಹಾಕಿದ್ದರಿಂದ ಉಮಾದೇವಿ ಗಾಡಿಯಿಂದ ಬಿದ್ದಿದ್ದರು. 

ಆ ವೇಳೆ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸು ಉಮಾದೇವಿಯವರ ಮೇಲೆ ಹರಿದ ಕಾರಣ ಗಂಭೀರ ಗಾಯಗೊಂಡರು. ತಕ್ಷಣವೇ ಅವರನ್ನು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕತ್ಸೆ ಪ್ರಯೋಜನವಾಗದೆ ಇಂದು ನಸುಕಿನ ಜಾವ ಮೃತಪಟ್ಟಿದ್ದಾರೆ. 

ಚಾಲಕ ಬಂಧನ: ಪ್ರಕರಣ ಸಂಬಂಧ ಕೆಎಸ್​ಆರ್​ಟಿಸಿ ಬಸ್ ಚಾಲಕ ಮಾರುತಿ ರಾವ್​​​ ಅವರನ್ನು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೃತ ಉಮಾದೇವಿ ಪುತ್ರಿ ವನಿತಾ ನೀಡಿದ ದೂರಿನ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. 

ಘಟನೆ ನಡೆದ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ಸ್ಥಳಕ್ಕೆ ಆಗಮನ: ಇನ್ನು ಈ ದುರ್ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗಿರಿನಾಥ್, ಘಟನೆಯ ತನಿಖೆ ನಡೆದ ಬಳಿಕ ತಪ್ಪು ಯಾರದ್ದು ಎಂದು ಗೊತ್ತಾಗುತ್ತದೆ. ರಸ್ತೆಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ. ಅಧಿಕಾರಿಗಳ ತಪ್ಪಾ, ಗುತ್ತಿಗೆದಾರರ ತಪ್ಪಾ ಎನ್ನುವುದು ಗೊತ್ತಾದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ಮಳೆ ಬರುತ್ತಿರುವ ಕಾರಣ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಅದಕ್ಕೆ ಜಲ್ಲಿ ಕಲ್ಲು ಹಾಕುತ್ತಿದ್ದೇವೆ ಎಂದರು.

ನಿನ್ನೆ ಅಪಘಾತದಿಂದ ಮಹಿಳೆ ಗಂಭೀರ ಗಾಯಗೊಂಡ ನಂತರರ ಕನ್ನಡಪರ ಸಂಘಟನೆಗಳ ಹೋರಾಟಗಾರರು, ಆಮ್ ಆದ್ಮಿ ಪಾರ್ಟಿ, ಕೆಆರ್​ಎಸ್ ಪಾರ್ಟಿ ಕಾರ್ಯಕರ್ತರು ಗುಂಡಿಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸಿದ್ದು ಕಂಡುಬಂತು.

SCROLL FOR NEXT