ರಾಜ್ಯ

ಕೆಂಪೇಗೌಡ ಪ್ರತಿಮೆ ಉದ್ಘಾಟನೆ: ಅರೇನಾ ಆವರಣದಲ್ಲಿ ಮೋದಿ ಸಭೆ, ಮೂವರು ಸಚಿವರಿಂದ ಸ್ಥಳ ವೀಕ್ಷಣೆ

Nagaraja AB

ಬೆಂಗಳೂರು: ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಭಾಗವಾಗಿ ನ.11ರಂದು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ  ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಗೆ ನಡೆಯುತ್ತಿರುವ ಪ್ರಗತಿ ಮತ್ತು ಸ್ಥಳ ಪರಿಶೀಲನೆಯನ್ನು  ಸಚಿವರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಆರ್ ಅಶೋಕ ಹಾಗೂ  ಡಾ. ಕೆ ಸುಧಾಕರ್  ಶನಿವಾರ ನಡೆಸಿದರು.  

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಮೂವರೂ ನಾಯಕರು, ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿರುವ ಜಾಗವನ್ನು ಕೂಡ ಕೂಲಂಕಷವಾಗಿ ವೀಕ್ಷಿಸಿದರು.ಮೋದಿಯವರ ಸಾರ್ವಜನಿಕ ಸಭೆಯನ್ನು ಎಲ್ಲಿ ನಡೆಸಿದರೆ ಸೂಕ್ತವೆನ್ನುವ ಉದ್ದೇಶದಿಂದ ಪ್ರತಿಮೆಯ ಹತ್ತಿರದಲ್ಲೇ ಇರುವ 40 ಎಕರೆ ವಿಸ್ತೀರ್ಣ ದ 'ಅರೇನಾ' ಪರಿಸರ ಮತ್ತು ಏರ್ ಪೋರ್ಟ್ ರೈಲು ನಿಲ್ದಾಣದ ಬಳಿ ಇರುವ ಸ್ಥಳಗಳೆರಡನ್ನೂ ಇವರು ಅವಲೋಕಿಸಿದರು.

ರೈಲು ನಿಲ್ದಾಣ ಇರುವ ಪ್ರದೇಶವು ಪ್ರತಿಮೆಗೆ ತುಂಬಾ ದೂರದಲ್ಲಿ ಇದ್ದು ಅಲ್ಲಿಗೆ ಪ್ರತಿಮೆ ಕೂಡ ಕಾಣುವುದಿಲ್ಲ. ಆದರೆ ಅರೇನಾ ಜಾಗಕ್ಕೆ ಪ್ರತಿಮೆ ಕಾಣಿಸುತ್ತದೆ. ಹೀಗಾಗಿ ಅದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದರು. ಈ ಸಂಬಂಧ ಸಿಎಂ ಅವರ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ಸಚಿವರು ನಿರ್ಧರಿಸಿದರು.

SCROLL FOR NEXT