ರಾಜ್ಯ

ಸಿಲಿಕಾನ್ ಸಿಟಿ ರಸ್ತೆಗಳು ಗುಂಡಿಮಯ: ಮಾನವ ಸರಪಳಿ ನಿರ್ಮಿಸಿ ಅಪಾರ್ಟ್'ಮೆಂಟ್ ನಿವಾಸಿಗಳಿಂದ ಪ್ರತಿಭಟನೆ

Manjula VN

ಬೆಂಗಳೂರು: ನಗರದ ಸುತ್ತಮುತ್ತಲಿನ ರಸ್ತೆಗಳು ಹೊಂಡಗಳಿಂದ ತುಂಬಿ ಹೋಗಿದ್ದು, ಭೀಕರ ಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಪ್ರೆಸ್ಟೀಜ್ ಕೆನ್ಸಿಂಗ್ಟನ್ ಗಾರ್ಡನ್ಸ್ ಮತ್ತು ಇತರ ವಸತಿ ಸಂಕೀರ್ಣಗಳ ನಿವಾಸಿಗಳು ಜಾಲಹಳ್ಳಿಯ ಎಚ್‌ಎಂಟಿ ಸೌಲಭ್ಯದ ಬಳಿಯ ಅಪಾರ್ಟ್‌ಮೆಂಟ್ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಕಾಂಪ್ಲೆಕ್ಸ್‌ನಿಂದ ಎಚ್‌ಎಂಟಿ ಆಸ್ಪತ್ರೆ ವರೆಗೂ ತೆರಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು, ಆದರೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅಪಾರ್ಟ್'ಮೆಂಟ್ ಬಳಿಯೇ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಬಿಇಎಲ್ ವೃತ್ತದಿಂದ ಎಚ್‌ಎಂಟಿ ಮುಖ್ಯರಸ್ತೆ, ಜಾಲಹಳ್ಳಿ ಮೂಲಕ ಪೀಣ್ಯ ಮೆಟ್ರೋ ನಿಲ್ದಾಣದವರೆಗಿನ ರಸ್ತೆಗಳು, ಪಾದಚಾರಿ ಮಾರ್ಗಗಳ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮಳೆಗೂ ಮುನ್ನವೇ ರಸ್ತೆಗಳ ಸ್ಥಿತಿ ಹದಗೆಟ್ಟಿತ್ತು. ಮಳೆ ನಂತರ ಮತ್ತಷ್ಟು ಹದಗೆಟ್ಟಿದೆ. ರಸ್ತೆಗುಂಡಿಗಳಿಂದ ಕೆಲ ತಿಂಗಳುಗಳಿಂದ ಹಲವು ಅಪಘಾತಗಳು ಸಂಭವಿಸಿವೆ ಎಂದು ಪ್ರತಿಭಟನೆ ನಡೆಸುತ್ತಿದ್ದ ಅಪಾರ್ಟ್'ಮೆಂಟ್ ನಿವಾಸಿಯೊಬ್ಬರು ಹೇಳಿದ್ದಾರೆ. 

ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತದಲ್ಲಿ ಹಿರಿಯ ನಾಗರೀಕರೊಬ್ಬರು ಹಲವು ಮೂಳೆ ಮುರಿತಗಳಿಗೆ ಒಳಗಾಗಿದ್ದು, ಕಳೆದ 3 ತಿಂಗಳಿನಿಂದ ಹಾಸಿಗೆಯಲ್ಲಿ ಮಲಗಿದ್ದಾರೆ. ಕಳೆದ ಆರು ತಿಂಗಳಿನಿಂದ ಈ ಸಮಸ್ಯೆಗಳ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಒತ್ತಡದಿಂದ ಕೆಲ ತೇಪೆ ಕೆಲಸ ಮಾಡುತ್ತಿದ್ದಾರೆ. ಆದರೆ, ಸಾಧಾರಣ ಮಳೆಯಾದರೂ ಗುಂಡಿಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಜನರ ಸಂಕಷ್ಟವನ್ನು ಅಧಿಕಾರಿಗಳ ಗಮನಕ್ಕೆ ತರಲು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮತ್ತೊಬ್ಬ ನಿವಾಸಿ ತಿಳಿಸಿದರು.

SCROLL FOR NEXT