ರಾಜ್ಯ

ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಭವಿಷ್ಯ ಹೇಳುವವರ ಮಾತು ನಂಬಿ ಚಿನ್ನಾಭರಣ, ನಗದು ಕಳೆದುಕೊಂಡ ಮಹಿಳೆ!

Ramyashree GN

ಬೆಂಗಳೂರು: ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದಾರೆ ಎಂಬುದನ್ನು ತಿಳಿದುಕೊಂಡ ಬಳಿಕ ಹಾರೋಹಳ್ಳಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯೂ ಆಗಿರುವವರ ಮನೆಗೆ ಬಂದು ತಮ್ಮ ಸೂಚನೆಯಂತೆ ಪೂಜೆ ಮಾಡದಿದ್ದರೆ 11 ದಿನದೊಳಗೆ ಪತಿ ಮತ್ತು ಮಗ ಸಾಯುತ್ತಾರೆ ಎಂದ ಮೂವರು ‘ಭವಿಷ್ಯ ನುಡಿಯುವವರು’ ಕುತಂತ್ರ ನಡೆಸಿದ್ದಾರೆ.

ಕಳ್ಳರ ಮೋಸಕ್ಕೆ ಒಳಗಾದ ಗೌರಮ್ಮ (38) ಅವರು ಚಿನ್ನಾಭರಣಗಳನ್ನು ಶುದ್ಧೀಕರಿಸಿದ ನಂತರ ಹಿಂದಿರುಗಿಸುವುದಾಗಿ ಆ ಮೂವರು ಹೇಳಿದ ನಂತರ ತಮ್ಮ ಮನೆಯಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ನೀಡಿದ್ದಾರೆ.

ಶುದ್ಧೀಕರಿಸಿದ ಚಿನ್ನವನ್ನು ಧರಿಸಿದರೆ ಮಾತ್ರ ತಮ್ಮ ಗಂಡ ಮತ್ತು ಮಗ ದೀರ್ಘಕಾಲ ಬದುಕುತ್ತಾರೆ ಎಂದೂ ಅವರು ನಂಬಿಸಿದ್ದಾರೆ. ಯಾರೋ ಇಡೀ ಕುಟುಂಬಕ್ಕೆ ಮಾಟಮಂತ್ರ ಮಾಡಿದ್ದಾರೆ ಮತ್ತು ಅದರ ಪರಿಣಾಮಗಳನ್ನು ತೊಡೆದುಹಾಕಲು ಪೂಜೆ ಮಾಡುವುದೇ ಅವರ ಮುಂದಿರುವ ಏಕೈಕ ಪರಿಹಾರ ಎಂದು ಹೇಳಿದ್ದ ಆರೋಪಿಗಳು, ಆಕೆಯ ಮನೆ ಮುಂದೆ ಪೂಜೆಯನ್ನೂ ಮಾಡಿದ್ದರು.

ತನಗಾದ ವಂಚನೆಯನ್ನು ಅರಿತ ಗೌರಮ್ಮ ಪೊಲೀಸರ ಬಳಿ ಬಂದು ತನ್ನ ಆಭರಣಗಳನ್ನು ವಾಪಸ್ ಪಡೆಯಲು ಸಹಾಯ ಮಾಡುವಂತೆ ಕೇಳಿದ್ದಾರೆ. ಆರೋಪಿಗಳು ಸ್ಥಳೀಯ ಅಲೆಮಾರಿ ಕಣಿ ಹೇಳುವವರಂತೆ ಕೈಯಲ್ಲಿ ಸಣ್ಣ ಡಮರುಗವನ್ನು ಹಿಡಿದಿದ್ದರು ಮತ್ತು ಸೋಮವಾರ ಮುಂಜಾನೆ ಕನಕಪುರ ರಸ್ತೆಯಲ್ಲಿರುವ ತನ್ನ ಮನೆಯ ಬಳಿ ತಿರುಗುತ್ತಿದ್ದರು ಎಂದು ಗೌರಮ್ಮ ತಿಳಿಸಿದ್ದಾರೆ.

'ಅವರು ನನ್ನ ಮನೆಯ ಮುಂದೆ ನಿಂತಿರುವುದನ್ನು ನೋಡಿದೆ. ಅವರಿಗೆ 10 ರೂಪಾಯಿ ಕೊಟ್ಟು ಮಗಳನ್ನು ಶಾಲೆಗೆ ಬಿಡಲು ಹೋಗಿದ್ದೆ. ನನ್ನ ಪತ್ನಿ ಒಬ್ಬಳೇ ಇರುವುದನ್ನು ತಿಳಿದು ಆಕೆಯ ಬಳಿಗೆ ಬಂದು 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಆರೋಪಿಗಳು ಅಕ್ಕಪಕ್ಕದ ಮನೆಗಳಿಗೂ ಹೋಗಿದ್ದರು ಆದರೆ, ಯಾರೂ ಅವರನ್ನು ಸತ್ಕಾರ ಮಾಡಲಿಲ್ಲ. ಅಷ್ಟೇ ಅಲ್ಲದೆ, ಹೋಗುವಾಗ ನನ್ನ ಹೆಂಡತಿಗೆ ನಾಲ್ಕು ದಿನ ಯಾರಿಗೂ ಹೇಳಬೇಡ ಎಂದೂ ಕೂಡ ಹೇಳಿದ್ದಾರೆ. ನನ್ನ ಹೆಂಡತಿ ಅಪರಿಚಿತರನ್ನು ಕುರುಡಾಗಿ ನಂಬಿದಳು ಮತ್ತು ಅವರು ಕೇಳಿದ್ದನ್ನೆಲ್ಲಾ ಕೊಟ್ಟಳು' ಎಂದು ಗೌರಮ್ಮ ಅವರ ಪತಿ ಕೃಷ್ಣ ಮೂರ್ತಿ ಟಿಎನ್ಐಇದೆ ತಿಳಿಸಿದರು.

ಮೂರ್ತಿಯಿಂದ ಪಡೆದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಮಹಿಳೆಯ ಮೂರ್ಖತನವನ್ನು ಆರೋಪಿಗಳು ನಗದೀಕರಿಸಿದ್ದಾರೆ' ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ರ ಅಡಿಯಲ್ಲಿ ವಂಚನೆ ಪ್ರಕರಣವನ್ನು ದಾಖಲಿಸಲಾಗಿದೆ.

SCROLL FOR NEXT