ರಾಜ್ಯ

ಐಟಿ ಕಂಪನಿಗಳು ಬೆಂಗಳೂರು ತೊರೆಯುವ ಬೆದರಿಕೆ: ಸರ್ಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್

Nagaraja AB

ಬೆಂಗಳೂರು: ಐಟಿ ಕಂಪೆನಿಗಳ ಬೆಂಗಳೂರು ತೊರೆಯುವ ಎಚ್ಚರಿಕೆಯ ಪತ್ರಕ್ಕೆ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಮುಗಿ ಬಿದ್ದಿದೆ. ಈ ಬಗ್ಗೆ ನಿಮ್ಮ ಉತ್ತರವೇನು ಎಂದು ಕಟುವಾಗಿ ಪ್ರಶ್ನಿಸಿದೆ.

ಈ ಸಂಬಂಧ ಕಾಂಗ್ರೆಸ್ ಘಟಕ ಇಂದು ಸರಣಿ ಟ್ವೀಟ್ ಮಾಡಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಗಂಭೀರ ವಿಚಾರಕ್ಕೆ ಇನ್ನೂ ಮೌನ ತಳೆದಿರುವುದೇಕೆ ? ಸ್ವತಃ ಸಿಎಂ ಬೆಂಗಳೂರು ಉಸ್ತುವಾರಿಯನ್ನು ಹೊಂದಿದ್ದಾರೆ. ನಗರಾಭಿವೃದ್ಧಿ ಇಲಾಖೆಯೂ ಸಿಎಂ ಬಳಿಯೇ ಇದೆ. ಎಲ್ಲವನ್ನೂ ಸಿಎಂ ಹೊಂದಿದ್ದರೂ ಬೆಂಗಳೂರಿಗೆ ಈ ಸ್ಥಿತಿ ಬಂದಿದ್ದೇಕೆ? ಎಂದು ಪ್ರಶ್ನಿಸಲಾಗಿದೆ.

ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ, ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರದಲ್ಲಿ. ಹಲವು ತಿಂಗಳ ಹಿಂದೆ ಬಿಜೆಪಿ ನಾಯಕ ಎಸ್ಎಂ ಕೃಷ್ಣ ಬೆಂಗಳೂರಿನ ದುರಾವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದರು. ಹಲವು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು, ಈಗ ಐಟಿ ಕಂಪೆನಿಗಳು ಪತ್ರ ಬರೆದಿವೆ. ಸಿಎಂ ಬೊಮ್ಮಾಯಿ ಅವರೇ ತಾವು ಎಚ್ಚರಾಗಲು ಇನ್ನೇನಾಗಬೇಕು? ಮಳೆಗೆ ಬೆಂಗಳೂರು ಮತ್ತೆ ನಲುಗಿದೆ ಎಂದು ಕಾಂಗ್ರೆಸ್ ಘಟಕ ಹೇಳಿದೆ.

ಬಿಜೆಪಿ ಸರ್ಕಾರದ  ಅಸಮರ್ಥ ಆಡಳಿತದ ಪರಿಣಾಮ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರು ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರು ಅಕ್ಷರಶಃ ನಲುಗಿಹೋಗಿದೆ. ಬಿಜೆಪಿ  ದ್ವೇಷ ಮತ್ತು ಹಿಂಸೆ ರಾಜಕಾರಣ ಬಿಟ್ಟು ಮೂಲಸೌಕರ್ಯಗಳ ಕಡೆ ಗಮನ ನೀಡಬೇಕು. ಇನ್ನಾದರೂ ಬಿಜೆಪಿ ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಂಡು ಜನತೆಯ ಕಷ್ಟಕ್ಕೆ ಸ್ಪಂದಿಸುವುದೇ? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೀಕಿಸಿದ್ದಾರೆ

SCROLL FOR NEXT