ಬೆಂಗಳೂರು: ಮಹಿಳಾ ಸಾಧಕರು ಮತ್ತು ಯುವ ತಾರೆಯರ ಸನ್ಮಾನ ಕಾರ್ಯಕ್ರಮಕ್ಕಾಗಿ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದಕ್ಕಾಗಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ರವೀಂದ್ರ ಕಲಾಕ್ಷೇತ್ರದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೌದು.. ಕಬ್ಬನ್ ಪಾರ್ಕ್ನಲ್ಲಿ ನಿತ್ಯ ಸಂಚರಿಸುವ 3 ಸಾವಿರಕ್ಕೂ ಹೆಚ್ಚು ವಾಕರ್ಸ್ ಮತ್ತು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಸದಸ್ಯರು ಮಹಿಳಾ ಸಾಧಕರು ಮತ್ತು ಯುವ ತಾರೆಯರನ್ನು ಸನ್ಮಾನಿಸಲು ಬಯಸಿದ್ದು, ಅಕ್ಟೋಬರ್ 9 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ಜೂನ್ 7 ರಂದು ರವೀಂದ್ರ ಕಲಾಕ್ಷೇತ್ರದ ಸಭಾಂಗಣವನ್ನು ಕಾಯ್ದಿರಿಸಿದ್ದರು, ಇದಕ್ಕಾಗಿ 24,373 ರೂ ಹಣವನ್ನೂ ಪಾವತಿ ಮಾಡಿದ್ದರು. ಆದರೆ ಸಂಘದ ಗಮನಕ್ಕೇ ತಾರದೇ ಮತ್ತು ಯಾವುದೇ ಕಾರಣ ನೀಡದೆ ರವೀಂದ್ರ ಕಲಾಕ್ಷೇತ್ರದ ಆಡಳಿತ ಮಂಡಳಿ ಬುಕ್ಕಿಂಗ್ ರದ್ದುಗೊಳಿಸಿತ್ತು.
ಈ ಕುರಿತು ಸಂಘದ ಸದಸ್ಯರು ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿದಾಗ, ಮುಖ್ಯಮಂತ್ರಿಗಳ ಕಚೇರಿಯಿಂದ ನಿರ್ದೇಶನ ಬಂದಿದೆ. ಹೀಗಾಗಿ ಬುಕ್ಕಿಂಗ್ ರದ್ದು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವರು ಕೂಡ ಭಾಗವಹಿಸುವ ಕಾರ್ಯಕ್ರಮವನ್ನು ಅದೇ ದಿನ ಆಯೋಜಿಸಲು ಸರ್ಕಾರ ಬಯಸಿದೆ. ಹೀಗಾಗಿ ಕಲಾಕ್ಷೇತ್ರದ ಪದಾಧಿಕಾರಿಗಳು ತಮ್ಮ ಕಾರ್ಯವನ್ನು ಅಕ್ಟೋಬರ್ 23 ಕ್ಕೆ ಬದಲಾಯಿಸುವಂತೆ ಸಂಘದ ಸದಸ್ಯರಿಗೆ ಸಲಹೆ ನೀಡಿದರು. ಆದರೆ ಸದಸ್ಯರು ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ದಿನಾಂಕ ಬದಲಾವಣೆ ಸಾಧ್ಯವಿಲ್ಲ ಎಂದು TNIE ಗೆ ತಿಳಿಸಿದರು.
ಹೈಕೋರ್ಟ್ ಮೊರೆ ಹೋದ ಸದಸ್ಯರು
ಇನ್ನು ಸಂಘದ ಸದಸ್ಯರು ಹೊರರಾಜ್ಯದಿಂದಲೂ ಕೆಲವರನ್ನು ಆಹ್ವಾನಿಸಿದ್ದಾರೆ. ಕಳೆದ ವರ್ಷ 21 ದೇಶಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದೇಶದಿಂದ ಬರುವವರು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬೇಕು ಮತ್ತು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯು ಅವರ ಯೋಜನೆಗಳಿಗೆ ಧಕ್ಕೆ ತರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತೆಯೇ ಕಲಾಕ್ಷೇತ್ರ ಆಡಳಿತ ಮಂಡಳಿ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಮೊರೆ ಹೋಗಿರುವುದರಿಂದ ಅವರ ಕಾರ್ಯಕ್ರಮ ಯಾವುದೇ ಬದಲಾವಣೆಯಿಲ್ಲದೆ ಸಾಗುತ್ತದೆ. ಕಲಾಕ್ಷೇತ್ರದ ಅಧಿಕಾರಿಗಳು ಬುಕಿಂಗ್ ದಿನಾಂಕದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯಬೇಕೆಂದು ಸಂಘದ ಪರ ವಕೀಲ ವಿಜಯ ಕುಮಾರ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೊರದಬ್ಬಿದ ಬೌನ್ಸರ್ ಗಳ ವಿರುದ್ಧ ಆಕ್ರೋಶ; ಕಾರು ಅಡ್ಡಾದಿಡ್ಡಿ ಚಾಲನೆ, 2 ಕಾರು ಜಖಂ, ಬೆಂಗಳೂರು ಟೆಕಿ ಸೇರಿ 4 ಮಂದಿ ಬಂಧನ
ಈ ಕುರಿತು ಮಾತನಾಡಿರುವ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ, “ನಾವು ಆಡಳಿತ, ಪೊಲೀಸ್, ಇತರ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದೇವೆ, ಆದರೆ ಯಾವುದೇ ಸಹಾಯ ಸಿಗಲಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವೆ' ಎಂದರು. ಅಲ್ಲದೆ ಕಲಾಕ್ಷೇತ್ರದ ಅಧಿಕಾರಿಗಳು ಬುಕಿಂಗ್ಗೆ ಅಡ್ಡಿಪಡಿಸದಂತೆ ತಡೆಯಬೇಕೆಂದು ಸಂಘದ ಪರ ವಕೀಲ ವಿಜಯ ಕುಮಾರ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.