ರಾಜ್ಯ

ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಬೆಂಗಳೂರು: ಕಾರ್ಪೊರೇಟ್ ಸಂಸ್ಥೆಗಳು ಬದಲಾವಣೆಯ ಭಾಗವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ  ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಕೇವಲ ಮೂಲಸೌಕರ್ಯಗಳನ್ನು ಮಾತ್ರವಲ್ಲ ಸಂಸ್ಕೃತಿಯಲ್ಲಿ ಬದಲಾವಣೆ ತರಬೇಕು. ಬಡವರಿಗೆ ಅಗತ್ಯವಿರುವ ಸೌಲಭ್ಯಗಳು ದೊರಕಿದಾಗ ಸಂಸ್ಕೃತಿಯೂ ಬದಲಾಗುತ್ತದೆ ಎಂದರು.

ಕಂಪನಿ ಹಾಗೂ  ಸಂಸ್ಥೆಗಳು ದತ್ತು ಪಡೆಯುವ ಕಾಲೇಜುಗಳಲ್ಲಿ ಕೇವಲ ಹಣ ಮಾತ್ರವಲ್ಲದೆ ಸಮಯವನ್ನೂ ನೀಡಬೇಕು. ಕಾಲೇಜುಗಳು ನಮ್ಮದೇ ಎಂಬ ಭಾವನೆ ಇರಬೇಕು. ಆಗ ವ್ಯತ್ಯಾಸ ಕಾಣಲು ಸಾಧ್ಯ. ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತಂದರೆ, ನಿಮ್ಮ ಬದುಕಿನಲ್ಲಿಯೂ ಬದಲಾವಣೆ ತರಲು ಸಾಧ್ಯ ಎಂದು ಅವರು ಹೇಳಿದರು.

ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯ ರಾಜ್ಯವಾಗಬೇಕು: ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯ ರಾಜ್ಯವಾಗಬೇಕು.  ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆ ಯ ಸಹಯೋಗದಲ್ಲಿ  4800 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. 30 – 40  ಕೋಟಿ ರೂ.ಗಳನ್ನು ಐಟಿಐ ಗಳನ್ನು ಆಧುನೀಕರಣಗೊಳಿಸಲು ವೆಚ್ಚ ಮಾಡಲಾಗಿದೆ. ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಮುಂದಿನ 2-3 ವರ್ಷಗಳಲ್ಲಿ ಯುವಿಸಿಇ ಐಐಟಿ ಮಾದರಿಯಲ್ಲಿ ಅಭಿವೃದ್ಧಿಯಾಗಲಿದೆ.  ಬೆಂಗಳೂರಿನ ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ನ್ನು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನೊಂದಿಗೆ ಸಹಯೋಗ ಹೊಂದಲು ಸಂಪರ್ಕಿಸಲಾಗುತ್ತಿದೆ. ನಿಮ್ಮ ಅನುಭವ, ಸಂಪರ್ಕಗಳನ್ನು ಹಂಚಿಕೊಳ್ಳಬೇಕು.ಅತ್ಯುತ್ತಮ ಜ್ಞಾನ ಕರ್ನಾಟಕದಲ್ಲಿ ಲಭ್ಯವಾಗಬೇಕು ಎನ್ನುವುದು  ನಮ್ಮ ಆಶಯ ಎಂದರು.

ಸಮಾಜದಿಂದ ಪಡೆದಿದ್ದನ್ನು  ಸಮಾಜಕ್ಕೆ ಹಿಂದಿರುಗಿಸಬೇಕು:  ಸಮಾಜ ನಡೆಯುತ್ತಿರುವುದು ದಾನ ನೀಡುವುದರಿಂದ. ಇಡೀ ವಿಶ್ವ ಹಾಗೂ ಸಮಾಜದಿಂದ ನಾವು ಪಡೆದಿರುತ್ತೇವೆ. ಅಂತಿಮವಾಗಿ ಗಳಿಸಿದ್ದನ್ನು ಇಲ್ಲಿಯೇ ಹಿಂದಿರುಗಿಸಬೇಕು. ದಾನ ನೀಡುವುದು ಬದುಕಿನ ಪ್ರಮುಖ ಭಾಗ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ ಅಥವಾ ಇನ್ಯಾವುದೇ ರೀತಿಯಲ್ಲಿ ನೀಡಿದರೂ ಅದನ್ನು ಹೂಡಿಕೆ ಎಂದು ಪರಿಗಣಿಸಲಾಗುತ್ತದೆಯೋ ಅಥವಾ ಖರ್ಚು ಎಂದು ಭಾವಿಸಬೇಕೇ ಎಂಬ ಪ್ರಶ್ನೆ ಸರ್ಕಾರದ ಮಟ್ಟದಲ್ಲಿಯೂ ಕೇಳಿ ಬರುತ್ತದೆ. ಸಮಾಜಕ್ಕೆ ನೀಡುವುದು ಯಾವಾಗಲೂ ಹಣದ ರೂಪದಲ್ಲಿಯೇ ಇರಬೇಕೆಂದಿಲ್ಲ. ಬದುಕಿನ ಬ್ಯಾಲೆನ್ಸ್  ಶೀಟ್ ನಿರ್ವಹಿಸುವುದು ಮುಖ್ಯ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎಂದರು.

ಉನ್ನತ ಶಿಕ್ಷಣ ಇಲಾಖೆ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಡಾ: ಸಿ.ಎನ್. ಅಶ್ವತ್ಥ್ ನಾರಾಯಣ್ ಅವರಂಥ   ಕ್ರಿಯಾಶೀಲ ಸಚಿವರೂ ಇದ್ದು, ನೈಜ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಅನುಷ್ಠಾನಕ್ಕೂ ಮುಂದಾಗಿದ್ದಾರೆ. ನೂತನ ಶಿಕ್ಷಣ ನೀತಿಯ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಶಿಕ್ಷಣ. ಕ್ಷೇತ್ರದಲ್ಲಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

SCROLL FOR NEXT