ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ಶುಭ ಹಾರೈಸಿದ್ದಾರೆ.
ನಮ್ಮೆಲ್ಲರ ನೆಚ್ಚಿನ ನಾಯಕರು, ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ 72ನೇ ಜನ್ಮದಿನಾಚರಣೆ. ಭಾರತ ದೇಶದ ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ, ಗುಜರಾತ್ ನ ಮುಖ್ಯಮಂತ್ರಿಗಳಾಗಿ, ಪ್ರಧಾನ ಮಂತ್ರಿಗಳಾಗಿ ಅವರ ಸಾರ್ವಜನಿಕ ಜೀವನದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ್ದಾರೆ. ಗುಜರಾತ್ ನಲ್ಲಿ ವಿದ್ಯುಚ್ಛಕ್ತಿ, ನೀರಾವರಿ, ಕುಡಿಯುವ ನೀರು ಮತ್ತು ಸಾಮಾಜಿಕವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ 4 ಬಾರಿ ಮುಖ್ಯಮಂತ್ರಿಗಳಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಕಳೆದ 8 ವರ್ಷಗಳಲ್ಲಿ ಇಡೀ ಭಾರತ ದೇಶದ ಅಭಿವೃದ್ಧಿ ಪಥ ಮುನ್ನಡೆಸಿದ್ದಾರೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ 72ನೇ ಹುಟ್ಟುಹಬ್ಬ ಸಂಭ್ರಮ: ಇಂದು ಹಲವು ಕಾರ್ಯಕ್ರಮಗಳಲ್ಲಿ ಭಾಗಿ, ಶುಭಾಶಯಗಳ ಸುರಿಮಳೆ
ಸಬ್ ಕಾ ಸಾತ್ ಸಬ್ ಕ ವಿಶ್ವಾಸ್ ಎಂಬ ಮಂತ್ರದ ಮೂಲಕ, ಆತ್ಮನಿರ್ಭರ ಮೂಲಕ, ರೈತರಿಗೆಗಾಗಿ ಕಿಸಾನ್ ಸಮ್ಮಾನ್ ಹೀಗೆ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಮಾಡುವ ಮೂಲಕ ಎಲ್ಲಾ ಭಾರತೀಯರ ಜನಮಾನಸದಲ್ಲಿದ್ದಾರೆ. ಕೋವಿಡ್ ನಿರ್ವಹಣೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಮುಂದಿನ ಒಂದು ತಿಂಗಳು ಸೇವಾ ತಿಂಗಳು ಎಂದು ಬೇರೆ ಬೇರೆ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸೇವೆಗಳನ್ನು ಮಾಡಲಿದ್ದೇವೆ ಎಂದರು.
ಪ್ರಧಾನಿ ಮೋದಿಯವರ ದೂರದೃಷ್ಟಿ ಮತ್ತು ಬದ್ಧತೆ ಎಲ್ಲರಿಗೂ ಮಾದರಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.