ಬಳ್ಳಾರಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಯಲ್ಲಿ ನಡೆದ ದುರಂತದಿಂದಾಗಿ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಭೀತಿ, ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ವೈದ್ಯರು ರಜೆ ನೀಡುವಂತೆ ಒತ್ತಾಯಿಸುತ್ತಾದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಿನಗಳಿಂದ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇಬ್ಬರು ರೋಗಿಗಳು ಸಾವನ್ನಪ್ಪಿರುವ ಕುರಿತು ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ರೋಗಿಗಳ ಕುಟುಂಬಗಳಿಂದ ಆಕ್ರೋಶ ಮತ್ತು ಪೊಲೀಸರ ಸಂಭವನೀಯ ವಿಚಾರಣೆ ತಪ್ಪಿಸಿಕೊಳ್ಳಲು, ಕಳೆದ ಎರಡು ದಿನಗಳಲ್ಲಿ ಅನೇಕ ವೈದ್ಯರು ರಜೆ ಕೋರಿದ್ದಾರೆ, ಆದರೆ VIMS ಅಧಿಕಾರಿಗಳು ಕಿರಿಯ ಸಿಬ್ಬಂದಿಯನ್ನು ಕೆಲಸಕ್ಕೆ ಮರಳಲು ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ರೋಗಿಗಳ ಸಾವಿನ ನಂತರ, ರಾಜ್ಯ ಸರ್ಕಾರವು ಆಸ್ಪತ್ರೆಯ ಅಧಿಕಾರಿಗಳ ಕಡೆಯಿಂದ ಲೋಪದೋಷಗಳ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿತ್ತು, ಏಕೆಂದರೆ ಈ ಹಿಂದೆ ಅನೇಕ ಸಾವುಗಳು ಆಮ್ಲಜನಕ ಪೂರೈಕೆಯಲ್ಲಿ ಅಡಚಣೆಗೆ ಸಂಬಂಧಿಸಿದ್ದಾಗಿವೆ. ಕನಿಷ್ಠ ಇನ್ನೂ ಮೂರು ಕುಟುಂಬಗಳು ಈಗ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿವೆ.
ಇದನ್ನೂ ಓದಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವು: ತನಿಖೆಗೆ ಸರ್ಕಾರದಿಂದ ಉನ್ನತ ಮಟ್ಟದ ಸಮಿತಿ ರಚನೆ
ಈ ಕುರಿತು ಟಿಎನ್ಐಇ ಜೊತೆ ಮಾತನಾಡಿರುವ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಅವರು, 'ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಒತ್ತಡದಲ್ಲಿದ್ದಾರೆ ಮತ್ತು ಅಧಿಕಾರಿಗಳು ಅವರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯವರೆಗೆ, ವಿದ್ಯುತ್ ಕಡಿತದಿಂದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ, ಇದನ್ನು ಸರ್ಕಾರದ ಸಮಿತಿಗೆ ವಿವರಿಸಲಾಗಿದೆ. ಲೋಪ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದೆ' ಎಂದು ವಿವರಿಸಿದರು.
ವಿಮ್ಸ್ಗೆ ತನಿಖಾ ತಂಡ ಭೇಟಿ
ಇನ್ನು ದುರಂತ ಸಂಬಂಧ ಐವರು ಸದಸ್ಯರ ತನಿಖಾ ಸಮಿತಿಯು ಶುಕ್ರವಾರ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಸದಸ್ಯರು ಅಧಿಕಾರಿಗಳು ಮತ್ತು ಮೃತರ ಕುಟುಂಬ ಸದಸ್ಯರೊಂದಿಗೆ ಸಭೆ ನಡೆಸಿದರು. ಇನ್ನೆರಡು ದಿನಗಳಲ್ಲಿ ತಂಡ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.