ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖವನ್ನು ಹೊಂದಿರುವ ಪೇಸಿಎಂ ಪೋಸ್ಟರ್ಗಳನ್ನು ನಗರದ ಹಲವು ಕಡೆ ಅಂಟಿಸಲಾಗಿದ್ದು, ಇದರಿಂದ ಸಿಎಂ ಬೊಮ್ಮಾಯಿ ತೀವ್ರ ಆಕ್ರೋಶಗೊಂಡಿದ್ದು, ಇದರ ಹಿಂದೆ ಇರುವವರ ವಿರುದ್ಧ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಪೇಸಿಎಂ ಪೋಸ್ಟರ್ ಅಂಟಿಸಿ ಅನಾಹುತ ಸೃಷ್ಟಿಸಿದವರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೇಂದ್ರ ವಿಭಾಗದ ಪೊಲೀಸರು ಈಗಾಗಲೇ ಸಾರ್ವಜನಿಕ ಸ್ಥಳಗಳ ವಿರೂಪ ಕಾಯಿದೆಯಡಿ ಒಂದು ಪ್ರಕರಣ ದಾಖಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ.
ಎಲ್ಲಾ ಡಿಸಿಪಿಗಳು ತಮ್ಮ ವಿಭಾಗಗಳಲ್ಲಿ ಇಂತಹ ಪೋಸ್ಟರ್ ಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ. ಪೋಸ್ಟರ್ಗಳಿಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರು ಒಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರು(ಡಿಸಿಪಿ) ಈ ವಿಷಯವನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನು ಓದಿ: ಪೇಟಿಎಂ ಮಾದರಿಯಲ್ಲಿ ʻಪೇ ಸಿಎಂʼ ಪೋಸ್ಟರ್ ವೈರಲ್; ಬಿಜೆಪಿ ಭ್ರಷ್ಟಾಚಾರ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ಅಭಿಯಾನ
ಬೇರೆಡೆ ಪೋಸ್ಟರ್ಗಳು ಕಂಡುಬಂದರೆ ಸಂಬಂಧಪಟ್ಟ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಪೋಸ್ಟರ್ಗಳು ಪತ್ತೆಯಾಗಿರುವ ಹೊಟೇಲ್ನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ' ಎಂದು ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೋಸ್ಟರ್ಗಳನ್ನು ಬಸ್ ನಿಲ್ದಾಣಗಳಲ್ಲಿ ಮತ್ತು ನಿರ್ಮಾಣ ಸ್ಥಳದಲ್ಲಿ ಅಂಟಿಸಲಾಗಿದೆ. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ, ಬಹುತೇಕ ಪೋಸ್ಟರ್ಗಳನ್ನು ಪೌರಕಾರ್ಮಿಕರು ಈಗಾಗಲೇ ತೆರವುಗೊಳಿಸಿದ್ದಾರೆ.