ರಾಜ್ಯ

ಶಾಲಾ ವಾಹನ, ಶಾಲಾ ಕ್ಯಾಂಪಸ್‌ನಲ್ಲಿ ಹಿಜಾಬ್ ಗೆ ನಿರ್ಬಂಧವಿಲ್ಲ: ಕರ್ನಾಟಕದ ಅಡ್ವೊಕೇಟ್ ಜನರಲ್ 

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ಮುಂದುವರೆದಿರುವಂತೆಯೇ ಶಾಲಾ ವಾಹನ, ಶಾಲಾ ಕ್ಯಾಂಪಸ್‌ನಲ್ಲಿ ಹಿಜಾಬ್ ಗೆ ನಿರ್ಬಂಧವಿಲ್ಲ ಎಂದು ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಹೇಳಿದ್ದಾರೆ.

ಹಿಜಾಬ್ ವಿವಾದದ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ಮುಂದುವರೆದಿರುವಂತೆಯೇ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಕರ್ನಾಟಕದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಶಾಲಾ ವಾಹನದಲ್ಲಿ ಅಥವಾ ಶಾಲಾ ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು ಇದೇ ವಿಚಾರವಾಗಿ ಮಾತನಾಡಿದ್ದು, ರಾಜ್ಯವು ಹಿಜಾಬ್ ಅನ್ನು ನಿಷೇಧಿಸಿಲ್ಲ ಮತ್ತು ಧರ್ಮ-ತಟಸ್ಥವಾಗಿರುವ ಸಮವಸ್ತ್ರವನ್ನು ಮಾತ್ರ ಸೂಚಿಸಿದೆ. ರಾಜ್ಯವು ಯಾವುದೇ ಧಾರ್ಮಿಕ ಚಟುವಟಿಕೆಯನ್ನು ನಿಷೇಧಿಸಿಲ್ಲ ಅಥವಾ ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದರು.

ಸಂಚಿನ ಬಳಿಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ತೆರಳಲಾರಂಭ: ಎಸ್ ಜಿ
ಇದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿರುವ ಮುಸ್ಲಿಂ ವಿದ್ಯಾರ್ಥಿನಿಯರು 2021ರವರೆಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸುತ್ತಿರಲಿಲ್ಲ. ಆದರೆ ಯಾರದೋ ಸಲಹೆ ಮೇರೆಗೆ ಇದ್ದಕ್ಕಿದ್ದಂತೆ ಅವರು ಈ ಅಭ್ಯಾಸ ಆರಂಭಿಸಿದರು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನ ಆರಂಭಿಸುವ 2021ರವರೆಗೂ ಕರ್ನಾಟಕದಲ್ಲಿ ಕಾಲೇಜುಗಳು ಸೂಚಿಸಿದ ಸಮವಸ್ತ್ರವನ್ನು ಎಲ್ಲಾ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಎಂದು ಎಸ್‌ಜಿ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.

ಯಾವುದೇ ವಿದ್ಯಾರ್ಥಿನಿ 2021ರವರೆಗೆ, ಹಿಜಾಬ್ ಧರಿಸುತ್ತಿರಲೂ ಇಲ್ಲ ಈ ಪ್ರಶ್ನೆ ಉದ್ಭವಿಸಲೂ ಇಲ್ಲ....ಹಿಜಾಬ್ ಧರಿಸಲು ಆರಂಭಿಸುವಂತೆ ನಿರಂತರ ಸಾಮಾಜಿಕ ಮಾಧ್ಯಮ ಸಂದೇಶಗಳು ಮೂಡತೊಡಗಿದವು. ಇದಕ್ಕೆ ದಾಖಲೆ ಇದೆ. ನಾನು ಅದರ ವಿವರಗಳನ್ನು ಸಲ್ಲಿಸಿದ್ದೇನೆ. ಇದು ಸ್ವಯಂಪ್ರೇರಿತವಲ್ಲ. ಇದೊಂದು ದೊಡ್ಡ ಪಿತೂರಿಯ ಭಾಗವಾಗಿತ್ತು. ಮಕ್ಕಳು ತಮಗೆ ನೀಡಲಾದ ಸಲಹೆಯಂತೆ ವರ್ತಿಸುತ್ತಿದ್ದರು ಎಂದು ಮೆಹ್ತಾ ಪೀಠಕ್ಕೆ ತಿಳಿಸಿದರು.

SCROLL FOR NEXT