ರಾಜ್ಯ

'ಪೇ ಸಿಎಂ' ಪೋಸ್ಟರ್ ವಿವಾದ: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡದ ಇಬ್ಬರು ಸದಸ್ಯರು ಪೊಲೀಸ್ ವಶಕ್ಕೆ!

Sumana Upadhyaya

ಬೆಂಗಳೂರು: ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಸಿಎಂ ಬೊಮ್ಮಾಯಿ ಅವರ ಫೋಟೊಗಳಿರುವ `ಪೇ ಸಿಎಂ’ ಎಂಬ ಪೋಸ್ಟರ್‌ಗಳನ್ನು ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಅಂಟಿಸಿದ್ದು ತೀವ್ರ ಸಂಚಲನ ಉಂಟುಮಾಡಿತು. ಪೋಸ್ಟರ್ ಅಂಟಿಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಸಿಬ್ಬಂದಿ, ಕಾರ್ಯಕರ್ತರನ್ನು ಮಧ್ಯರಾತ್ರಿ ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. 

ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾದ ಮಾಜಿ ಮುಖ್ಯಸ್ಥರಾಗಿದ್ದ ಬಿ ಆರ್ ನಾಯ್ಡು ಅವರನ್ನು ವಸಂತನಗರದಲ್ಲಿರುವ ಎಂಬಸಿ ಅಪಾರ್ಟ್ ಮೆಂಟ್ ನಿಂದ ನಸುಕಿನ ಜಾವ 2 ಗಂಟೆಗೆ ನಾಲ್ವರು ಪೊಲೀಸರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು, ಭಯಭೀತರಾದ ಅವರ ಪತ್ನಿ ಕೆಪಿಸಿಸಿ ಸಾಮಾಜಿಕ ಮಾಧ್ಯಮ ತಂಡಗಳಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಸಹಾಯಕ್ಕಾಗಿ ಕರೆ ಮಾಡಿದರು. 

ಕಾಂಗ್ರೆಸ್ ನ ಮತ್ತೊಬ್ಬ ಸಾಮಾಜಿಕ ಮಾಧ್ಯಮದ ಪದಾಧಿಕಾರಿ, ಕೆಆರ್ ಪುರ, ಎ ಕೃಷ್ಣಪ್ಪ ಅವರ ಸಹೋದರ ಡಿಎ ಗೋಪಾಲ ಅವರ ಪುತ್ರ ಡಿ ಎ ಗಗನ್ ಯಾದವ್ ಅವರನ್ನು ಕೆ ಆರ್ ಪುರಂನಲ್ಲಿರುವ ಅವರ ನಿವಾಸದಿಂದ ಪೊಲೀಸರು ಸದಾಶಿವನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. 

ಬಿಆರ್ ನಾಯ್ಡು, ಗಗನ್

ಮಾಧ್ಯಮಗಳಿಗೆ ಮನವಿ: ಕೆಪಿಸಿಸಿ ಅಧಿಕೃತ ವಾಟ್ಸಾಪ್ ಗ್ರೂಪ್ 2.14 ಕ್ಕೆ ವರ್ಚುವಲ್ ಎಸ್‌ಒಎಸ್ ಅನ್ನು ಬಿಡುಗಡೆ ಮಾಡಿತು, “ಪ್ರೀತಿಯ ಮಾಧ್ಯಮದವರೆ ಈಗ ಮಧ್ಯರಾತ್ರಿ 2 ಗಂಟೆ ಮೀರಿದೆ. ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಮಾಜಿ ಅಧ್ಯಕ್ಷ ಬಿಆರ್ ನಾಯ್ಡು ಅವರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಕರೆದೊಯ್ದರು. ಮಾಧ್ಯಮ ಪ್ರತಿನಿಧಿಗಳು ಹೈಗ್ರೌಂಡ್ಸ್ ಬಳಿ ಬನ್ನಿ, ಅವರ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳು ಸಹಕರಿಸಿ ಎಂದು ಕೋರಿಕೊಂಡರು.

ಇದಕ್ಕೂ ಮುನ್ನ ನಿನ್ನೆ ಹಗಲು ಈ ಪೋಸ್ಟರ್ ಬಗ್ಗೆ ಮಾತನಾಡಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಸಿ ಹೆಚ್ ಪ್ರತಾಪ್ ರೆಡ್ಡಿ, ‘ಪೇಸಿಎಂ’ ಪೋಸ್ಟರ್ ಅಂಟಿಸಿದವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. "ಕೇಂದ್ರ ವಿಭಾಗದ ಪೊಲೀಸರು ಸಾರ್ವಜನಿಕ ಸ್ಥಳಗಳ ವಿಕಾರ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿದ್ದರು. ಪ್ರಕರಣಗಳನ್ನು ನಗರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿದೆ.

ಎಲ್ಲಾ ಡಿಸಿಪಿಗಳಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ನೋಡಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿರುವುದಾಗಿ ಆಯುಕ್ತರು ತಿಳಿಸಿದ್ದರು. ನಿನ್ನೆ ಬೆಳಗ್ಗೆ ಹೈಗ್ರೌಂಡ್ಸ್ ಪೊಲೀಸರು ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. 

ಬಳಿಕ ಸದಾಶಿವನಗರ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲಾ ಮೂರು ಪೊಲೀಸ್ ಠಾಣೆಗಳು ಕೇಂದ್ರ ವಿಭಾಗದ ಅಡಿಯಲ್ಲಿ ಬರುತ್ತವೆ. ಸಂಬಂಧಪಟ್ಟ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ದೂರಿನ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪೇಟಿಎಂ ಮಾದರಿಯಲ್ಲಿ ಪೇಸಿಎಂ ಪೋಸ್ಟರ್ ಗಳನ್ನು ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಬಸ್ ಶೆಲ್ಟರ್‌ಗಳಲ್ಲಿ, ನಿರ್ಮಾಣ ಸ್ಥಳದಲ್ಲಿ ಹಾಕಲಾಗಿತ್ತು. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ ಬಹುತೇಕ ಪೋಸ್ಟರ್‌ಗಳನ್ನು ಪೌರಕಾರ್ಮಿಕರು ತೆಗೆದಿದ್ದಾರೆ.

ಪೊಲೀಸರು ಪೇಸಿಎಂ ಪೋಸ್ಟರ್ ತೆಗೆದುಹಾಕಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

SCROLL FOR NEXT