ರಾಜ್ಯ

ಹಲವು ಹುದ್ದೆ, ಹಣ ದುರುಪಯೋಗ: ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟ್ರಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Lingaraj Badiger

ಬೆಂಗಳೂರು: ಹಲವು ಹುದ್ದೆಗಳನ್ನು ಹೊಂದುವ ಮೂಲಕ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಾಮಕೃಷ್ಣ ರೆಡ್ಡಿ ವಿರುದ್ಧ ಕರ್ನಾಟಕ ರಾಜ್ಯ ನರ್ಸಿಂಗ್ ಮತ್ತು ಅಲೈಡ್‌ ಹೆಲ್ತ್‌ ಸೈನ್ಸ್‌ ಸಂಸ್ಥೆಗಳ ನಿರ್ವಹಣಾ ಸಂಘ ಲೋಕಾಯುಕ್ತಕ್ಕೆ ದೂರು ನೀಡಿದೆ.

ದೂರುದಾರರಾದ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಡಿ.ಹರ್ಷ ಅವರು ಡಾ.ರಾಮಕೃಷ್ಣ ಅವರ ವಿರುದ್ಧ ದೂರು ನೀಡಿದ್ದು, ಅವರು ಐದು ವಿಭಿನ್ನ ಹುದ್ದೆಗಳನ್ನು ಹೊಂದಿದ್ದಾರೆ. ಪ್ರೊಫೆಸರ್, ಕಮ್ಯುನಿಟಿ ಮೆಡಿಸಿನ್, ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್, ಅರೆವೈದ್ಯಕೀಯ ಮಂಡಳಿ ಸದಸ್ಯ-ಕಾರ್ಯದರ್ಶಿ; ಕರ್ನಾಟಕ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನ ಶಿಕ್ಷಣ ಪ್ರಾಧಿಕಾರದ ವಿಶೇಷ ಅಧಿಕಾರಿ ಹಾಗೂ ಆರೋಗ್ಯ ವಿವಿಯ ರಿಜಿಸ್ಟ್ರಾರ್(ಮೌಲ್ಯಮಾಪನ) ಮತ್ತು ಆಡಳಿತ ಉಸ್ತುವಾರಿಯನ್ನು ಹೊಂದಿದ್ದು, ಎಲ್ಲಾ ಹುದ್ದೆಗಳ ಸಂಬಳ ಮತ್ತು ಸಂಬಂಧಿತ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಥಿರ ಠೇವಣಿಗಳ ನವೀಕರಣ ಪ್ರಕ್ರಿಯೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ, ಅಕ್ರಮ ಹಣ ಹಿಂಪಡೆಯುವಿಕೆ ಹಾಗೂ ಕೆಲಸ ಮಾಡದ ಸಿಬ್ಬಂದಿಗೆ 69 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪರೀಕ್ಷಾ ಶುಲ್ಕ ಮತ್ತು ದಂಡಕ್ಕಾಗಿ ಸಂಗ್ರಹಿಸಲಾದ 14 ಕೋಟಿ ರೂಪಾಯಲ್ಲೂ ಅವ್ಯವಹಾರ ನಡೆದಿದೆ ಎಂದು ಸಹ ಸಂಘ ಆರೋಪಿಸಿದೆ. ಇಂಧನ, ತಿಂಡಿ ತಿನಿಸು ಮುಂತಾದ ವಿವಿಧ ವೆಚ್ಚಗಳಿಗೆ ಸರಿಯಾದ ದಾಖಲೆ ಅಥವಾ ಚೀಟಿಗಳನ್ನು ನಿರ್ವಹಿಸಿಲ್ಲ. ಸಾರ್ವಜನಿಕ ಖರೀದಿ ಕಾಯ್ದೆ ಪ್ರಕಾರ ಸರಕುಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಟೆಂಡರ್ ಇಲ್ಲದೆ ಕೋಟ್ಯಂತರ ರೂಪಾಯಿ ಮೊತ್ತದ ಸರಕುಗಳನ್ನು ಪಡೆಯಲಾಗಿದೆ ಎಂದು ಆರೋಪಿಸಿದೆ.

SCROLL FOR NEXT