ರಾಜ್ಯ

ವೈರಲ್ ವಿಡಿಯೋ: ರಸ್ತೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಬರಿಗೈಯಲ್ಲೇ ಎಳೆದು ಬಿಸಾಡಿದ ಬಸ್ ಪ್ರಯಾಣಿಕ!!

Srinivasamurthy VN

ಚಾಮರಾಜನಗರ: ಬಸ್ ಗೆ ಅಡ್ಡಲಾಗಿ ರಸ್ತೆ ಮಧ್ಯೆ ಮಲಗಿದ್ದ ಹೆಬ್ಬಾವನ್ನು ಪ್ರಯಾಣಿಕನೋರ್ವ ಬರಿಗೈಯಲ್ಲೇ ಎಳೆದು ಬಿಸಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕರ್ನಾಟಕದ ನಾಗರಹೊಳೆ ಹುಲಿ ಅಭಯಾರಣ್ಯ ಪ್ರದೇಶದ ಮಲೆ ಮಹದೇಶ್ವರ ರಸ್ತೆ (MMRoad) ರಸ್ತೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಮಲೆ ಮಹದೇಶ್ವರ ರಸ್ತೆಯಲ್ಲಿ ಹೆಬ್ಬಾವೊಂದು ರಸ್ತೆಗೆ ಬಂದು ಮಲಗಿದ್ದು, ಇದೇ ರಸ್ತೆಯಲ್ಲಿ ಬಸ್ ವೊಂದು ಬಂದಿದೆ.

ಈ ವೇಳೆ ರಸ್ತೆಯಲ್ಲಿ ಹಾವಿರುವುದನ್ನು ಕಂಡು ಚಾಲಕ ಬಸ್ ನಿಲ್ಲಿಸಿದ್ದಾನೆ. ಸುಮಾರು ಹೊತ್ತು ಕಳೆದರೂ ಹಾವು ಕದಲಲಿಲ್ಲ. ಪರಿಣಾಮ ಬಸ್ ನಿಂದ ಇಳಿದ ಪ್ರಯಾಣಿಕನೋರ್ವ ಬರಿಗೈಯಲ್ಲೇ ಹೆಬ್ಬಾವನ್ನು ಹಿಡಿದು ಪಕ್ಕಕ್ಕೆ ಬಿಸಾಡುತ್ತಾನೆ.

ಇದರಿಂದ ಗಲಿಬಿಲಿಯಾದ ಹಾವು ಕೂಡಲೇ ಕಾಡಿನೊಳಗೆ ಸರಸರನೆ ಹೋಗುತ್ತದೆ. ಬಳಿಕ ಪ್ರಯಾಣಿಕ ಬಸ್ ಹತ್ತಿ ಹೋಗುತ್ತಾನೆ. 

ಪರಿಸರ ಪ್ರೇಮಿಗಳ ಕೆಂಗಣ್ಣು
ಇನ್ನು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಲೇ ಪ್ರಯಾಣಿಕನ ಕೃತ್ಯಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ನಿಯಮಗಳ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ. ರಾತ್ರಿ ವೇಳೆಯಲ್ಲಿ ಅಭಯಾರಣ್ಯಗಳಲ್ಲಿ ವಾಹನಗಳಿಗೆ ನಿಷೇಧವಿದೆ.

ಹೀಗಿದ್ದೂ ಬಸ್ ಪ್ರಯಾಣ ತಪ್ಪು. ಅಲ್ಲದೆ ರಸ್ತೆ ಮೇಲೆ ತನ್ನ ಪಾಡಿಗೆ ತಾನು ಮಲಗಿದ್ದ ಹೆಬ್ಬಾವಿಗೆ ತೊಂದರೆ ಕೊಟ್ಟಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

SCROLL FOR NEXT