ರಾಜ್ಯ

ಬೆಂಗಳೂರಿನಲ್ಲಿ ಮತ್ತೆ ತಲೆದೋರಿದ ಟ್ರಾಫಿಕ್ ಸಮಸ್ಯೆ: ಪೋಲ್ ಚೆಕ್'ಪೋಸ್ಟ್ ಗಳಿಂದ ಶುರುವಾಯ್ತು ಕಿರಿಕಿರಿ?

Manjula VN

ಬೆಂಗಳೂರು: ಕೆಲವು ತಿಂಗಳ ಹಿಂದೆ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಜಾರಿಗೆ ತಂದ ಹಲವು ಕ್ರಮಗಳ ನಮ್ಮ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವಂತೆ ಮಾಡಿತ್ತು. ಆದರೆ, ಇದೀಗ ಮತ್ತೆ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದೆ.

ಮೈಸೂರು ರಸ್ತೆ, ಕೆಆರ್ ಪುರಂ, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ. ಹೆಬ್ಬಾಳ, ಹೊಸೂರು ರಸ್ತೆಯಂತಹ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮೊದಲಿನಂತೆಯೇ ಶುರುವಾಗಿದೆ.

ಸಾಮಾನ್ಯವಾಗಿ ಮಾರತಳ್ಳಿಯಿಂದ ಕೋರಮಂಗಲ ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತಿತ್ತು. ಆದರೆ, ಬುಧವಾರ ಬೆಳಿಗ್ಗೆ, ಕೋರಮಂಗಲ ತಲುಪಲು ಸುಮಾರು 1.5 ಗಂಟೆ ಬೇಕಾಯಿತು. ಮಾರತಹಳ್ಳಿ ಜಂಕ್ಷನ್ ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು’ ಎಂದು ಆಟೋರಿಕ್ಷಾ ಚಾಲಕ ಮದನ್ ಅವರು ಹೇಳಿದ್ದಾರೆ.

ಸಲೀಂ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಕ್ರಮಗಳ ಕೈಗೊಂಡಿದ್ದರು. ಈ ಕ್ರಮದಿಂದ ಗೊರಗುಂಟೆಪಾಳ್ಯ, ಸಾರಕ್ಕಿ, ಕುಮಾರಸ್ವಾಮಿ ಲೇಔಟ್ ಮತ್ತು ಬನಶಂಕರಿ ಬಸ್ ಟರ್ಮಿನಲ್ ಅನ್ನು ಸಂಚಾರ ಪೊಲೀಸರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದರೆ, ಕಾಡುಬೀಸನಹಳ್ಳಿ, ಸಿಲ್ಕ್ ಬೋರ್ಡ್, ಕೆಆರ್ ಪುರಂ, ಹೆಬ್ಬಾಳ ಮೇಲ್ಸೇತುವೆಯಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ನಿರ್ವಹಣೆ ಸಾಧ್ಯವಾಗಿದೆ. ಆದರೆ, ಮಾರತಹಳ್ಳಿ ಕಡೆಗೆ ಹೋಗುವ ವಾಹನ ಸವಾರರು ಸರ್ವಿಸ್ ರಸ್ತೆ ಪ್ರವೇಶಿಸಿ ಮೇಲ್ಸೇತುವೆ ಮೂಲಕ ಎಡ ತಿರುವು ಪಡೆಯಬೇಕಾದ ಕಾರಣ ಗೊಂದಲ ಸೃಷ್ಟಿಯಾಗಿದೆ. ಮಾರತಹಳ್ಳಿ ಕಡೆಗೆ ತೆರಳುವ ವಾಹನ ಸವಾರರು ಎಡಗಡೆಯಿಂದ ಸರ್ವಿಸ್ ರಸ್ತೆಗೆ ತೆರಳುವಂತೆ ಫಲಕಗಳನ್ನು ಹಾಕಿದರೆ ಉತ್ತಮ ಎಂದು ಮತ್ತೊಬ್ಬ ಪ್ರಯಾಣಿಕ ಪದ್ಮನಾಭ ಅವರು ಸಲಹೆ ನೀಡಿದ್ದಾರೆ.

ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಮಾತನಾಡಿ, ಸಂಚಾರ ಪೊಲೀಸರು ನಗರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳ ಮೇಲೆ ವಿಶೇಷ ಗಮನ ಹರಿಸುವ ಮೂಲಕ ದಟ್ಟಣೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆಂದು ಹೇಳಿದ್ದಾರೆ.

ನಗರದಾದ್ಯಂತ 100 ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಚುನಾವಣಾ ಅಧಿಕಾರಿಗಳು ಸ್ಥಾಪಿಸಿರುವುದರಿಂದ ಸಂಚಾರ ದಟ್ಟಣೆಯಲ್ಲಿ ಸ್ವಲ್ಪ ಹೆಚ್ಚಳವಾಗಿರಬಹುದು. ಮಳೆಯಿದಂದಲೂ ಸಂಚಾರ ದಟ್ಟಣೆ ಹೆಚ್ಚಾಗಿರಬಹುದು ಎಂದು ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಾಹನಗಳನ್ನು ಯಾದೃಚ್ಛಿಕವಾಗಿ ನಿಲ್ಲಿಸಿ ತಪಾಸಣೆ ನಡೆಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಮ್ಮ ಕೆಲವು ಟ್ರಾಫಿಕ್ ಪೊಲೀಸರೂ ಈ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ, ಎಲ್ಲರೂ ಸಂಚಾರ ದಟ್ಟಣೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

SCROLL FOR NEXT