ರಾಜ್ಯ

10 ಸೆಂ.ಮೀ ಮಳೆ ಬಂದರೆ ಬೆಂಗಳೂರಿನ 2,023 ಸ್ಥಳಗಳಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ! ಜೆಡಿಎಸ್ ಕಿಡಿ

Nagaraja AB

ಬೆಂಗಳೂರು: ಒಂದು ದಿನದ ಅವಧಿಯಲ್ಲಿ ಬೆಂಗಳೂರಿನಲ್ಲಿ 10 ಸೆಂ.ಮೀ. ಮಳೆ ಬಂದರೆ 2,023 ಸ್ಥಳಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಯಲ್ಲಿ ಹೇಳಲಾಗಿದೆ. 

ಈ ವರದಿ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.  ಕೇವಲ ಒಂದು ಸೆಂಟಿಮೀಟರ್ ಮಳೆಗೆ ಬೆಂಗಳೂರಿನ ಐದು ಪ್ರದೇಶಗಳು ಮುಳುಗಡೆಯ ಭೀತಿ ಎದುರಿಸಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದು ಕಳೆದ ಹದಿನೈದು ವರ್ಷಗಳಲ್ಲಿ ಹೆಚ್ಚು ಕಾಲ ಅಧಿಕಾರ ನಡೆಸಿದ ಎರಡೂ ರಾಷ್ಟ್ರೀಯ ಪಕ್ಷಗಳ ವೈಫಲ್ಯಕ್ಕೆ ಹಿಡಿದಗನ್ನಡಿ ಎಂದು ಜೆಡಿಎಸ್ ಟೀಕಿಸಿದೆ. 

ಒಟ್ಟಿನಲ್ಲಿ, ದುಡ್ಡು ಲೂಟಿ ಹೊಡೆಯಲು, ಗಂಟು ಕಟ್ಟಲು ಎರಡೂ ರಾಷ್ಟೀಯ ಪಕ್ಷಗಳಿಗೆ ಬೆಂಗಳೂರು ಬೇಕೇ ಬೇಕು. ಆದರೆ, ಮೂಲಸೌಕರ್ಯ ಸುಧಾರಣೆ ಮಾತ್ರ ಕನಸಿನ ಮಾತು. ಜನರು ಎಚ್ಚೆತ್ತುಕೊಂಡು ಮತ ಚಲಾಯಿಸುವ ಸಮಯ ಬಂದಿದೆ ಎಂದಿದೆ. 

ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ  ರಾಜ್ಯ ಬಿಜೆಪಿ ಸರ್ಕಾರ, ಹಿಂದೆ 5 ವರ್ಷಗಳ ಪೂರ್ಣಾವಧಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷಗಳು ರಾಜಧಾನಿಯ ಮೂಲ ಸೌಕರ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿ ಸಾಧಿಸಿದ್ದೇನು? ಎಂದು ಪ್ರಶ್ನಿಸಿದ್ದು, ಬೆಂಗಳೂರಿಗೆ ನೀಡಿದ ಅನುದಾನದ ಹೆಸರಲ್ಲಿ ಎರಡೂ ಪಕ್ಷಗಳು ಲೂಟಿ ಹೊಡೆದ ಪರಿಣಾಮ ಈ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

SCROLL FOR NEXT