ರಾಜ್ಯ

ಜಗದೀಶ್ ಶೆಟ್ಟರ್ ಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿಲ್ಲ: ಸಿಎಂ ಬೊಮ್ಮಾಯಿ

Manjula VN

ಹುಬ್ಬಳ್ಳಿ: ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲಿನಿಂದಲೂ ಜಗದೀಶ್ ಶೆಟ್ಟರ್ ಹಾಗೂ ನಾನು ಸ್ನೇಹಿತರು. ಅವರಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿಲ್ಲ. ಅವರ ಬೆಂಬಲಿಗರ ಮಾತಿನಲ್ಲಿ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ನಿತ್ಯವೂ ವರಿಷ್ಠರೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ, ಟಿಕೆಟ್ ತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಹೇಳುವುದರಲ್ಲಿ ಸತ್ಯವಿಲ್ಲ ಎಂದು ಹೇಳಿದರು.

ಜಗದೀಶ ಶೆಟ್ಟರ್ ಬಿಜೆಪಿಯ ನಿಷ್ಠಾವಂತ ನಾಯಕರಾಗಿದ್ದು, ಅವರದ್ದು ಜನಸಂಘ ಕಾಲದ ಮನೆತನ.‌ ಉತ್ತರ ಕರ್ನಾಟಕ ಭಾಗಕ್ಕೆ ಅವರು ಅಗತ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಉಳಿಸಿಕೊಳ್ಳಬೇಕೆಂದು ವರಿಷ್ಠರೊಂದಿಗೆ ಮಾತನಾಡುತ್ತಿದ್ದೇವೆ ಎಂದು ತಿಳಿಸಿದರು.

ನಾನು ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ನೀರಾವರಿ ಯೋಜನೆಯಲ್ಲಿ ನಡೆದ ಹಗರಣದಲ್ಲಿ ನೆಹರು ಓಲೇಕಾರ ಅವರಿಗೆ ಶಿಕ್ಷೆ ಆಗಿದೆ. ಅದನ್ನ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

SCROLL FOR NEXT