ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಅರಣ್ಯ ಸಿಬ್ಬಂದಿಯ ಚಿತ್ರಹಿಂಸೆಯಿಂದ 49 ವರ್ಷದ ಆದಿವಾಸಿ ವ್ಯಕ್ತಿ ಕಸ್ಟಡಿಯಲ್ಲಿ ಮೃತಪಟ್ಟಿದ್ದ ಘಟನೆ ಇನ್ನೂ ಮಾಸದಿರುವಾಗಲೇ, 30 ವರ್ಷದ ಯುವಕನ ಸಾವಿನ ಮತ್ತೊಂದು ಘಟನೆ ಆದಿವಾಸಿ ಜನಾಂಗ ಮತ್ತು ಮೃತರ ಕುಟುಂಬ ಸದಸ್ಯರನ್ನು ಕೆರಳಿಸಿದೆ.
ಜೇನು ಕುರುಬ ಜನಾಂಗಕ್ಕೆ ಸೇರಿದ ಹೊಸಹಳ್ಳಿ ಬುಡಕಟ್ಟು ಗ್ರಾಮದ ನಿವಾಸಿ ಮಾಸ್ತಿ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದರು. ಆದರೆ, ಬಳ್ಳೆ ಹಾಡಿಯ ಬಳಿ ಶವವಾಗಿ ಪತ್ತೆಯಾಗಿರುವ ಬಗ್ಗೆ ಕುಟುಂಬದವರಿಗೆ ಮಾಹಿತಿ ಲಭಿಸಿದೆ. ಹೂಳು ಮರಳಿನಲ್ಲಿ ಸಿಕ್ಕಿ ಬಿದ್ದಿರುವುದೇ ಯುವಕನ ಸಾವಿಗೆ ಕಾರಣ ಎನ್ನಲಾಗಿದೆ.
ಆದರೆ, ಕು1ಟುಂಬಸ್ಥರು ಇದು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವಂತೆ ಕಾಣುತ್ತಿಲ್ಲ. ಈ ಸಾವಿನ ಹಿಂದೆ ಆಗಾಗ ಕಿರುಕುಳ ನೀಡುತ್ತಿದ್ದ ಕೆಲ ಅರಣ್ಯ ಸಿಬ್ಬಂದಿಯ ಕೈವಾಡವಿದೆ ಎಂದು ದೂರಿದರು.
ಅರಣ್ಯ ಇಲಾಖೆಯ ಸಿಬ್ಬಂದಿ ಮಹೇಶ್ ಮೀನುಗಾರಿಕೆಗೆ ತೆರಳುವ ಆದಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದು, ಈ ಹಿಂದೆ ಅವರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಇದನ್ನೂ ಓದಿ: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಿಂದ ಬಲವಂತದಿಂದ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಜೇನು ಕುರುಬರು
ಮಂಗಳವಾರ, ಮಾಸ್ತಿ ಮೀನುಗಾರಿಕೆಗೆ ತೆರಳಿದ್ದಾಗ, ಅರಣ್ಯ ಸಿಬ್ಬಂದಿ ಆತನನ್ನು ಹಿಡಿದು ಪ್ರಕರಣ ದಾಖಲಿಸಲು ಬೆನ್ನಟ್ಟಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
'ಭಯದಿಂದ ಓಡಿಹೋದ ಮಾಸ್ತಿ ನಂತರ ಸಿಕ್ಕಿದ್ದಾನೆ. ಈ ವೇಳೆ ಆತನನ್ನು ಥಳಿಸಿರಬಹುದು ಮತ್ತು ನಂತರ ಆತನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ ಎಂದು ತೋರಿಸಿರಬುಹುದು' ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಈಮಧ್ಯೆ, ಅಂತರಸಂತೆ ಪೊಲೀಸರು ಘಟನೆಯನ್ನು ಅಸಹಜ ಸಾವು ಎಂದು ಖಚಿತಪಡಿಸಿದ್ದು, ಹೆಚ್ಚಿನ ವಿವರಗಳನ್ನು ಪಡೆಯುತ್ತಿದ್ದಾರೆ.