ರಾಜ್ಯ

ಅಕ್ಷಯ ತೃತೀಯ ಎಂದರೇನು? ಅದಕ್ಕೆ ಆ ಹೆಸರು ಬಂದಿದ್ದಾರೂ ಏಕೆ ಗೊತ್ತೇ? ಈ ದಿನದಂದು ಮಾಡಬೇಕಾದ ವಿಶೇಷ ಕೆಲಸಗಳಿವು...

Srinivas Rao BV

ಹಿಂದೂಗಳ ಜನಪ್ರಿಯ ಹಬ್ಬ ಅಕ್ಷಯ ತೃತಿಯ ಪ್ರಸಕ್ತ ವರ್ಷದಲ್ಲಿ ಏ.22 ರಂದು ಆಚರಿಸಲ್ಪಡುತ್ತಿದೆ. ಈ ವಿಶೇಷ ದಿನದಂದು ಜನರು ಮೌಲ್ಯಯುತವಾದುದ್ದನ್ನು ಅಥವಾ ಅಮೂಲ್ಯವಾದ ವಸ್ತುಗಳನ್ನು ಖರೀದಿಸಲು ಮುಗಿಬೀಳುವುದು ಸರ್ವೇಸಾಮಾನ್ಯದ ದೃಶ್ಯ. 

ಕಾರುಗಳ ಡೆಲಿವರಿ ಪಡೆಯುವುದು ಸೇರಿದಂತೆ, ಐಷಾರಾಮಿ ವಸ್ತುಗಳು ಸೇರಿದಂತೆ ಹಲವು ವಸ್ತುಗಳನ್ನು ಖರೀದಿಸಿದರೆ ಅದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸಿ ಸಂಪತ್ತು ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆ ಇದೆ. 

ಅಕ್ಷಯ ತೃತೀಯದ ದಿನ ಧಾನ್ಯಗಳ ಖರೀದಿಗೆ ಪ್ರಾಶಸ್ತ್ಯ 

ಅಕ್ಷಯ ತೃತೀಯದ ದಿನದಂದು ಧಾನ್ಯಗಳನ್ನು ಖರೀದಿಸುವುದನ್ನು ಹಲವು ಜ್ಯೋಷಿಗಳು ಉತ್ತೇಜಿಸುತ್ತಾರೆ.  ಇದರಿಂದಾಗಿ ಸಂಪತ್ತು ಹಾಗೂ ಮನೆಯ ಆರ್ಥಿಕ ಸ್ಥಿತಿಗತಿಗಳು ಉತ್ತಮಗೊಳ್ಳುತ್ತವೆ ಎಂದು ನಂಬಲಾಗಿದೆ. ಇನ್ನು ಈ ದಿನದಂದು ಹಸಿರು ಬಣ್ಣಕ್ಕೆ ವಿಶೇಷ ಪ್ರಾಮುಖ್ಯತೆ ಇದ್ದು, ಹಸಿರು ಬಣ್ಣ ಅದೃಷ್ಟವನ್ನು ಸೂಚಿಸುತ್ತದೆ. ಆದ್ದರಿಂದ ಮನೆಯಲ್ಲಿ ಈ ದಿನದಂದು (ಅಕ್ಷಯ ತೃತೀಯ ದಿನದಂದು) ಧಾನ್ಯಗಳು- ಆಹಾರ ಪದಾರ್ಥಗಳು ಎಥೇಚ್ಛವಾಗಿರುವಂತೆ ನೋಡಿಕೊಳ್ಳಬೇಕೆಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ತುಪ್ಪಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ತುಪ್ಪದಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಅಕ್ಷಯ ತೃತೀಯದ ದಿನದಂದು ತುಪ್ಪವನ್ನು ದಾಸ್ತಾನು ಮಾಡುವುದರಿಂದ ಹಾಗೂ ಭಗವಾನ್ ವಿಷ್ಣು, ಲಕ್ಷ್ಮಿಗೆ ತುಪ್ಪದ ದೀಪ ಹಚ್ಚುವುದನ್ನು ಸೂಚಿಸಲಾಗಿದೆ. 

ಅಕ್ಷಯ ತೃತೀಯದ ಅರ್ಥವೇನು?

ಹಾಗಾದರೆ, ಅಕ್ಷಯ ತೃತೀಯದ ಅರ್ಥವೇನು ಎಂದು ತಿಳಿಯುವುದಾದರೆ, ಸಂಸ್ಕೃತದಲ್ಲಿ ಅಕ್ಷಯ ಅಂದರೆ ಕ್ಷಯವಲ್ಲದ್ದು, ಯಾವುದು ಕ್ಷಯಿಸುವುದಿಲ್ಲವೋ (ಕಡಿಮೆಯಾಗುವುದಿಲ್ಲವೋ ಅದು) ಅದನ್ನು ಅಕ್ಷಯ ತೃತೀಯ ಎನ್ನುತ್ತಾರೆ. 

ಅಕ್ಷಯ ತೃತೀಯದ ದಿನ ಕೇವಲ ಐಷಾರಾಮಿ ವಸ್ತುಗಳನ್ನು ಖರೀದಿಸುವುದಷ್ಟೇ ಅಲ್ಲ. ನಾವು ಯಾವೆಲ್ಲಾ ಕೆಲಸಗಳನ್ನು ಮಾಡುತ್ತೇವೋ ಅವೆಲ್ಲವೂ ಅಕ್ಷಯವಾಗಲಿದೆ. ಉದಾಹರಣೆಗೆ, ಏನನ್ನಾದರೂ ದಾನ ಮಾಡಿದರೂ ಅದೂ ಅಕ್ಷಯವಾಗುತ್ತದೆ, ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದು ದ್ವಿಗುಣಗೊಳ್ಳುತ್ತದೆ. ಈ ಕಾರಣದಿಂದಾಗಿ ಆಹಾರ, ವಸ್ತ್ರ (ಬಟ್ಟೆ), ಪುಸ್ತಕ, ತೆಂಗಿನಕಾಯಿ, ಇತರ ಪದಾರ್ಥಗಳನ್ನು ದಾನ ಮಾಡುವ ಸಂಪ್ರದಾಯವಿದೆ. ಈ ಮೂಲಕ ನಮ್ಮ ಸಂಪತ್ತನ್ನು ದ್ವಿಗುಣಗೊಳಿಸಿಕೊಳ್ಳಲು ಹಿರಿಯರ ಆಶೀರ್ವಾದ ಪಡೆಯಬಹುದಾಗಿದೆ. ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನೂ ಈ ದಿನ ಮಾಡುವ ಶ್ರೇಷ್ಠ ಕೆಲಸ ಎಂದು ನಂಬಲಾಗಿದೆ.

-ಆಶಾ.ಎನ್

ashuashan1@gmail.com

SCROLL FOR NEXT