ರಾಜ್ಯ

ನಟಿ ರಮ್ಯಾ ಅವರನ್ನು ಬಿಜೆಪಿಗೆ ಕರೆಯುವಷ್ಟು ಬರಗೆಟ್ಟಿಲ್ಲ: ಸಚಿವ ಆರ್.ಅಶೋಕ್

Manjula VN

ಬೆಂಗಳೂರು: ನಟಿ ರಮ್ಯಾ ಅವರನ್ನು ಬಿಜೆಪಿಗೆ ಕರೆಯುವಷ್ಟು ಬರಗೆಟ್ಟಿಲ್ಲ. ನಮ್ಮ ಪಕ್ಷದಿಂದ ರಮ್ಯಾ ಅವರಿಗೆ ಆಹ್ವಾನ ಕೊಟ್ಟಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂಬ ರಮ್ಯಾ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ವೇಳೆ ರಮ್ಯಾ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಹೀರೋ ಆಗಲು ಪ್ರಯತ್ನಿಸುತ್ತಾರೆ. ಇದರಿಂದ ಕಾಂಗ್ರೆಸ್‌ಗೆ ಸಹಾಯವಾಗಲಿ ಎಂದು ರಮ್ಯಾ ಈ ರೀತಿ ಮಾತನಾಡಿದ್ದಾರೆಂದು ಹೇಳಿದರು.

ರಮ್ಯಾ ಯಾವತ್ತಿದ್ದರೂ ಕಾಂಗ್ರೆಸ್‌ನವರು. ಅವರಿಗೆ ನಾವು ಯಾವುದೇ ಆಹ್ವಾನ ನೀಡಿಲ್ಲ. ಯಾವ ಸೀಟೂ ಕೊಡುವುದಿಲ್ಲ. ಯಾವ ಮಂತ್ರಿ ಹುದ್ದೆನೂ ಕೊಡುವುದಿಲ್ಲ. ಅವರು ಸಿನಿಮಾದಲ್ಲಿದ್ದಾರೆ. ಅಲ್ಲೇ ಇರಲಿ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಲಿಂಗಾಯತ ಸಿಎಂ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಸ್ವಾಮೀಜಿಗಳು ಕೂಡ ಹೇಳಿಕೆಯನ್ನು ಖಂಡಿಸಿದ್ದಾರೆ. ಇದು ಸಮುದಾಯ ವಿರೋಧಿ ಹೇಳಿಕೆಯಾಗಿದೆ. ಲಿಂಗಾಯತರ ಶಾಪ ಕಾಂಗ್ರೆಸ್‌ಗೆ ತಟ್ಟಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕಿಡಿಕಾರಿದರು.

ಕನಕಪುರದಲ್ಲಿ ಬಿಜೆಪಿಗೆ ಅದ್ಭುತ ಪ್ರತಿಕ್ರಿಯೆಗಳು ಬರುತ್ತಿದೆ. ಇಲ್ಲಿನ ಜನರು ಕಾಂಗ್ರೆಸ್ ನಿಂದ ಬೇಸತ್ತು ಹೋಗಿದ್ದಾರೆ. ಕನಕಪುರದಲ್ಲಿ ಮೋದಿ ಸರ್ಕಾರ ಬೇಕಿದೆ. ಬಿಜೆಪಿ ಎಲ್ಲಾ 24 ಕ್ಷೇತ್ರಗಳಿಗೆ 'ಜಯ್ ವಾಹಿನಿ' ಆರಂಭಿಸಿದ್ದು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು 150 ಸೀಟು ಗೆಲ್ಲುವ ಗುರಿಯನ್ನು ನೀಡಿದ್ದಾರೆ. ಅದಕ್ಕಾಗಿಯೇ ನಾವು ರಾಜ್ಯದಾದ್ಯಂತ ಜಯ್ ವಾಹಿನಿ ಅಭಿಯಾನ ನಡೆಸುತ್ತಿದ್ದೇವೆ. ಕರ್ನಾಟಕದಲ್ಲಿ ಶೇ.100ಕ್ಕೆ 100ರಷ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT