ರಾಜ್ಯ

ಬೆಂಗಳೂರು: 'ಅನೈತಿಕ ಸಂಬಂಧ' ಪ್ರಶ್ನಿಸಿದ ಮಹಿಳೆಯನ್ನೇ ಕೊಂದ ವ್ಯಕ್ತಿ

Srinivasamurthy VN

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಮಹಿಳೆ ಬಲಿಯಾಗಿರುವ ದಾರುಣ ಘಟನೆ ಬೆಂಗಳೂರಿನ ಬಸವೇಶ್ವರನಗರದ ಜೆಸಿ ನಗರದಲ್ಲಿ ಗುರುವಾರ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ ನಗರದ ಬಸವೇಶ್ವರ ನಗರದ ಜೆಸಿ ನಗರದ ಸರಗುಣಂ (35) ಕೊಲೆಯಾದವರು. ಮನೆ ಕೆಲಸ ಮಾಡುತ್ತಿದ್ದ ಸರಗುಣಂ, ಆಟೋ ಚಾಲಕನಾಗಿದ್ದ ಗಣೇಶ್ (22) ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಲ್ಲದೆ ಆತನಿಗೆ 50 ಸಾವಿರ ಹಣವನ್ನು ನೀಡಿ ಬಾಡಿಗೆ ಮನೆ ಕೂಡ ಮಾಡಿಕೊಟ್ಟಿದ್ದಳು. 

ಈ ಮಧ್ಯೆ ಬೇರೆ ಮಹಿಳೆ ಜೊತೆ ಗಣೇಶ್ ಸಲುಗೆಯಿಂದ ಇರುವ ಮಾಹಿತಿ ತಿಳಿದು ನಿನ್ನೆ ಯುವಕನ ಮನೆಗೆ ಸರಗುಣಂ ಬಂದಿದ್ದಳು. ಈ ವೇಳೆ ನಾನೇ ಹಣಕೊಟ್ಟು, ಮನೆ ಮಾಡಿಕೊಟ್ಟು ನಿನ್ನ ನೋಡಿಕೊಳ್ಳುತ್ತಿದ್ದರೂ ಬೇರೆ ಮಹಿಳೆ ನೋಡಿಕೊಳ್ಳುತ್ತಿಯಾ ನನ್ನ ಹಣ ವಾಪಸ್ ಕೊಡು, ಸಲುಗೆಯಿಂದಿರುವ ಮಹಿಳೆ ಯಾರೆಂದು ಹೇಳು ಎಂದು ಪ್ರಶ್ನೆ ಮಾಡಿದಾಗ ಗಲಾಟೆ ಆರಂಭವಾಗಿದೆ. ಈ ವೇಳೆ ಗಣೇಶ್ ನಾನು ಸಾಯುವುದಾಗಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದಾಗ ಸರಗುಣಂ ಅಡ್ಡ ಬಂದಿದ್ದು, ಯುವಕ ಕೆಳಗಿಳಿದಿದ್ದ. 

ಇದೇ ಸಮಯದಲ್ಲಿ ತಾನು ಸಾಯುವೆ ಎಂದು ಸರಗುಣಂ ನೇಣಿನ ಕುಣಿಕೆಯನ್ನು ಕುತ್ತಿಗೆಗೆ ಹಾಕೊಂಡಿದ್ದಾಳೆ. ಈ ವೇಳೆ ಗಣೇಶ್ ಹಗ್ಗ ಎಳೆದು ಚೇರ್ ಒದ್ದಿದ್ದಾನೆ. ಪರಿಣಾಮ ಹಗ್ಗ ಕತ್ತಿಗೆ ಬಿಗಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ಆಕೆಯನ್ನು ಗಣೇಶ್ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. 

ಪೊಲೀಸರ ದಿಕ್ಕು ತಪ್ಪಿಸಲು ಆತ್ಮಹತ್ಯೆ ಯತ್ನ ಮಾಡಿಕೊಂಡಿದ್ದಾಳೆಂದು ಡ್ರಾಮಾ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಸವೇಶ್ವರನಗರ ಪೊಲೀಸರು ಅನುಮಾನದ ಮೇಲೆ ಆರೋಪಿ ಗಣೇಶ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ. ಇನ್ನು ಸರಗುಣಂಗೆ ಈಗಾಗಲೇ ಮದುವೆಯಾಗಿ 17 ವರ್ಷದ ಮಗು ಕೂಡ ಇದೆ. ಆದರೂ ಕೂಡ ಗಣೇಶ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದೀಗ ಸಾವಿನ ಮನೆ ಸೆರಿದ್ದಾಳೆ. ಈ ಕುರಿತು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT