ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಆಗಸ್ಟ್ 1ರಿಂದ ದ್ವಿಚಕ್ರ ವಾಹನಗಳು, ಆಟೋಗಳು, ಟ್ರಾಕ್ಟರುಗಳು, ಮೋಟಾರು ರಹಿತ ವಾಹನಗಳು, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಮತ್ತು ಕ್ವಾಡ್ರಿ ಸೈಕಲ್ ಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನಿಷೇಧ ಹೇರಿದ್ದು, ಈ ನಡುವಲ್ಲೇ ಅಪಘಾತ ತಪ್ಪಿಸಲು ಕೆಎಸ್ಆರ್ಟಿಸಿ ಕೂಡ ಚಾಲಕರಿಗೆ ಕೆಲ ಸೂಚನೆಗಳನ್ನು ನೀಡಿದೆ.
ಮೈಸೂರಿನಿಂದ ಬೆಂಗಳೂರಿಗೆ ಪ್ರತೀನಿತ್ಯ ನೂರಾರು ಜನರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.
118 ಕಿ.ಮೀ ವ್ಯಾಪ್ತಿಯಲ್ಲಿ ಅಪಘಾತ ತಡೆಯಲು ಮೈಸೂರು ವಿಭಾಗದ ಅಧಿಕಾರಿಗಳು ಕ್ರಮ ಕೈಗೊಂಡಿದ್ದು ಗರಿಷ್ಠ ವೇಗವನ್ನು ಗಂಟೆಗೆ 100 ಕಿ.ಮೀ ಕಾಯ್ದುಕೊಳ್ಳುವಂತೆ ಚಾಲಕರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೆ ಬ್ರೇಕ್: ನಿಯಮ ಮುರಿದರೆ ದಂಡ
ಎಕ್ಸ್ ಪ್ರೆಸ್ ವೇಯಲ್ಲಿ 3ನೇ ಪಥವನ್ನು ಬಿಟ್ಟು, ಮೊದಲ ಮತ್ತು ಎರಡನೇ ಲೇನ್ ನಲ್ಲಿ ಬಸ್ ಗಳ ಓಡಿಸುವಂತೆ. ಮುಂಭಾಗದಲ್ಲಿ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ಚಾಲಕರು ಸರಿಯಾದ ಮಾರ್ಗವನ್ನು ಮಾತ್ರ ಬಳಸಬೇಕು.
ಲೇನ್ ಶಿಸ್ತು ಕಾಯ್ದುಕೊಳ್ಳುವುದರ ಜೊತೆಗೆ ಚಾಲಕರು ಸೈಡ್ ಮಿರರ್ಗಳನ್ನು ನೋಡುತ್ತಿರಬೇಕು. ಲೇನ್ ಬದಲಾವಣೆಯ ಸಮಯದಲ್ಲಿ ಟರ್ನ್ ಇಂಡಿಕೇಟರ್ಗಳನ್ನು ಕಡ್ಡಾಯವಾಗಿ ಬಳಸಬೇಕೆಂದು, ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ ಗರಿಷ್ಠ 80 ಕಿಮೀ ವೇಗವನ್ನು ಕಾಯ್ದುಕೊಳ್ಳುವಂತೆ ಹಾಗೂ ಎಡಿಪಿಸಿ ಅಲೋಕ್ ಕುಮಾರ್ ಅವರು ಗುರ್ತಿಸಿರುವ 25 ಆ್ಯಕ್ಸಿಂಡೆಟ್ ಸ್ಪಾಟ್ ಗಳಲ್ಲಿ ಬಹಳಷ್ಟು ಎಚ್ಚರಿಕೆಯಿಂದಿರುವಂತೆಯೂ ಚಾಲಕರಿಗೆ ಕೆಎಸ್ಆರ್ಟಿಸಿ ಸೂಚನೆ ನೀಡಿದೆ.