ರಾಜ್ಯ

ಪ್ರಚೋದನಕಾರಿ ಭಾಷಣ ಆರೋಪ: ವಿಎಚ್‌ಪಿ ಮುಖಂಡರು, ಬಿಜೆಪಿ ಮಹಿಳಾ ನಾಯಕಿ ವಿರುದ್ಧ ಪ್ರಕರಣ ದಾಖಲು

Nagaraja AB

ಮಂಗಳೂರು: ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಪ್ರಕರಣವನ್ನು  ಎಸ್‌ಐಟಿ ತನಿಖೆಗೆ ಆಗ್ರಹಿಸಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ  ವಿಶ್ವ ಹಿಂದೂ ಪರಿಷತ್ ನ ಇಬ್ಬರು ಮುಖಂಡರ ವಿರುದ್ಧ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಎಚ್‌ಪಿ ಮುಖಂಡರಾದ ಶರಣ್ ಪಂಪ್‌ವೆಲ್ ಮತ್ತು ದಿನೇಶ್ ಮೆಂಡನ್ ಅವರ ಭಾಷಣಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಇದೇ ವಿಷಯವಾಗಿ ಜುಲೈ 28ರಂದು ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದಕ್ಕಾಗಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವೀಣಾ ಶೆಟ್ಟಿ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಂದೂ ಸಂರಕ್ಷಕರಿಂದ ಜಿಹಾದಿ ರಾಕ್ಷಸರಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಪಂಪ್‌ವೆಲ್ ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ವರದಿಯಾಗಿದೆ. ಹಿಂದೂ ತಾಯಂದಿರು ಅನ್ಯಾಯವಾದಾಗ ಸೌಟುಗಳನ್ನು ಹಿಡಿಯುವ ಕೈಯಲ್ಲಿ ಆಯುಧಗಳನ್ನು ಹಿಡಿಯಬೇಕೆಂದು ಅವರು ಒತ್ತಾಯಿಸಿದರು. ದಿನೇಶ್ ಮೆಂಡನ್ ಕೂಡಾ ಇದೇ ರೀತಿಯ ಭಾಷಣ ಮಾಡುವ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ.

ಪ್ರತಿಭಟನಾ ಸ್ಥಳದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು ಭಾಷಣಗಳನ್ನು ಗಮನಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ರೀತಿ ಜುಲೈ 28 ರಂದು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ವೀಣಾ ಶೆಟ್ಟಿ, ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ  ಪ್ರವೇಶ ನೀಡಬಾರದು, ಅವರು ಮದರಸಾಗಳಿಗೆ ಹೋಗಬೇಕು ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎನ್ನಲಾಗಿದೆ. 

SCROLL FOR NEXT