ರಾಜ್ಯ

ಬರಪೀಡಿತ ಗ್ರಾಮಗಳಾಗಿ ಘೋಷಿಸಲು ಸರ್ಕಾರಕ್ಕೆ ರೈತರ ಒತ್ತಾಯ, ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಬೆದರಿಕೆ!

Nagaraja AB

ಬೆಳಗಾವಿ: ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬದುಕಲು ಕಷ್ಟವಾಗುತ್ತಿದ್ದು, ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ವಲಸೆ ಹೋಗುವುದಾಗಿ ಅಥಣಿ, ಚಿಕ್ಕೋಡಿ, ರಾಯಭಾಗ ಮತ್ತು ಕಾಗವಾಡ ಸುತ್ತಮುತ್ತಲಿನ ಬರಪೀಡಿತ ಪ್ರದೇಶಗಳ ಜನರು ಎಚ್ಚರಿಕೆ ನೀಡಿದ್ದಾರೆ. 

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್,  ಇತ್ತೀಚೆಗೆ  ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ತಮ್ಮ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇವರೊಂದಿಗೆ ಕಾಗವಾಡ ಶಾಸಕ ರಾಜು ಕಾಗೆ ಇದ್ದರು. ಮುಂಗಾರು ಹಂಗಾಮಿನಲ್ಲಿ ತಮ್ಮ ಗ್ರಾಮಗಳಲ್ಲಿ ಮಳೆ ಕಡಿಮೆಯಾಗಿದೆ ಎಂದು ರೈತರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯ ಮೂಲಕ ತಮ್ಮ ಗ್ರಾಮಕ್ಕೆ ಪ್ರವಾಹ ಉಂಟಾಗಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ತಮ್ಮ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳು ಹಾನಿಗೊಳಗಾಗಿವೆ ಮತ್ತು ಮೇವಿನ ಕೊರತೆಯಿಂದ ಜಾನುವಾರುಗಳ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ತಮ್ಮ ಹಳ್ಳಿಯ ಸುತ್ತಮುತ್ತ ಯಾವುದೇ ಉದ್ಯೋಗ ಸಿಗುತ್ತಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.  ಹೀಗಾಗಿ ಮಹಾರಾಷ್ಟ್ರಕ್ಕೆ ಉದ್ಯೋಗಕ್ಕೆ ಹೋಗುವಂತಾಗಿದೆ ಎಂದಿದ್ದಾರೆ. 

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಾಯಕ ಬಗಾದಿ ಮಾತನಾಡಿ, ಬರಪೀಡಿತ ಪ್ರದೇಶಗಳಾದ ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗದಲ್ಲಿ ರೈತರ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಆ ಭಾಗಗಳ ರೈತರಿಗೆ ಆದಾಯವನ್ನು ಒದಗಿಸುವ ಮತ್ತು ಅವರ ಉಳಿವಿಗೆ ನೆರವಾಗುವ ಕೆಲವು ಯೋಜನೆಗಳನ್ನು ಪರಿಚಯಿಸುವ ಮೂಲಕ ಸರ್ಕಾರ ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿಗೆ ಬರಪೀಡಿತ ಪ್ರದೇಶದ ರೈತರ ಪರಿಸ್ಥಿತಿ ಕುರಿತು ಈಗಾಗಲೇ ವಿವರವಾಗಿ ವಿವರಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾಗೆ ಹೇಳಿದರು. ಪಾಟೀಲ ಅವರು ಸಲ್ಲಿಸಿರುವ ವರದಿ ಆಧರಿಸಿ ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಭಾಗದ ಎಲ್ಲ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
 

SCROLL FOR NEXT